ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಯುವತಿಗೆ ಚಾಕು ಹಾಕಿ ತಾನೂ ಚಾಕು ಚುಚ್ಚಿಕೊಂಡಿದ್ದ ಪವನ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
ಲಯಸ್ಮಿತ ತಾಯಿ ರಾಜಾನುಕುಂಠೆ ಠಾಣೆಯಲ್ಲಿ ಪವನ್ ಹಾಗೂ ಕಾಲೇಜಿನ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಪವನ್ ವಿಚಾರಣೆ ನಡೆಸಿದ್ದು, ಕೊಲೆಗೆ ಪವನ್ ಮುಂಚೆಯೇ ಪ್ಲಾನ್ ಮಾಡಿದ್ದ ಎಂದು ತಿಳಿದುಬಂದಿದೆ.
ಪವನ್ ಕೊಲೆಯಾದ ಲಯಸ್ಮಿತಳನ್ನು ಪ್ರೀತಿಸುತ್ತಿದ್ದ ಆದರೆ ಲಯಸ್ಮಿತಳಿಗೆ ಪವನ್ ಒಪ್ಪಿಗೆಯಾಗಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪವನ್ ಲಯಸ್ಮಿತರ ಫೋಟೊವನ್ನೇ ಹಾಕಿಕೊಂಡಿದ್ದ. ತನ್ನ ಎದೆಯ ಮೇಲೂ ಆಕೆಯ ಹೆಸರಿನ ಟ್ಯಾಟೂ ಹಾಕಿಸಿದ್ದ.
ಕೊಲೆ ಮಾಡುವ ಒಂದು ಗಂಟೆ ಮೊದಲು ಎಲ್ಲ ಫೋಟೊಗಳನ್ನು ಪವನ್ ಡಿಲೀಟ್ ಮಾಡಿದ್ದಾನೆ. ಇದೇ ಕಾಲೇಜಿನವನಲ್ಲದ ಪವನ್ ಕಾಲೇಜಿಗೆ ಬಂದಿದ್ದು ಹೇಗೆ? ಈತನಿಗೆ ಇದೇ ಕಾಲೇಜಿನ ಬೇರೆ ಯಾರಾದರೂ ಸಹಾಯ ಮಾಡಿದ್ದರಾ ಎನ್ನುವ ಪ್ರಶ್ನೆಗಳು ಎದುರಾಗಿವೆ.
ಬೇರೆ ಯಾವುದೋ ವಿದ್ಯಾರ್ಥಿಯ ಐಡಿ ಕಾರ್ಡ್ ಪಡೆದ ಪವನ್ ಸೀದ ಲಯಸ್ಮಿತ ಕ್ಲಾಸ್ ಬಳಿ ಬಂದಿದ್ದಾನೆ. ಕಾರಿಡಾರ್ ಬಳಿ ಆಕೆಯನ್ನು ಕರೆದು, ತಕ್ಷಣ ಕುತ್ತಿಗೆ, ಎದೆ ಹಾಗೂ ಹೊಟ್ಟೆಗೆ ಚಾಕು ಹಾಕಿದ್ದಾನೆ.