ಹೊಸದಿಗಂತ ಡಿಜಿಟಲ್ ಡೆಸ್ಕ್
1999 ರಲ್ಲಿ ಕಂದಹಾರ್ನಲ್ಲಿ ಭಾರತದ ಏರ್ ಇಂಡಿಯಾ ವಿಮಾನ IC-814 ಅನ್ನು ಹೈಜಾಕ್ ಮಾಡಿದ ಭಯೋತ್ಪಾದಕರಲ್ಲಿ ಒಬ್ಬನಾದ ಹೂರ್ ಮಿಸ್ತ್ರಿ ಅಲಿಯಾಸ್ ಜಾಹಿದ್ ಅಖುಂಡ್ ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆಗೀಡಾಗಿದ್ದಾನೆ.
ಬೈಕ್ನಲ್ಲಿ ಆತನ ಮನೆಗೆ ಆಗಮಿಸಿದ ಇಬ್ಬರು ಮುಸುಕುದಾರಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಉಗ್ರ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಭಯೋತ್ಪಾದಕ ಸಂಘಟನೆ ಜೈಶ್-ಎ-ಮುಹಮ್ಮದ್ ಜೊತೆ ಸಂಬಂಧ ಇರಿಸಿಕೊಂಡಿದ್ದ ಜಹೂರ್, ತಾನೊಬ್ಬ ಉದ್ಯಮಿಯಂತೆ ನಟಿಸಿ ಪಾಕ್ ನಲ್ಲಿ ತಲೆಮರೆಸಿಕೊಂಡಿದ್ದ. ಇಬ್ಬರು ದಾಳಿಕೋರರು ಆತನ ಮನೆಗೆ ಆಗಮಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾಸ್ಕ್ ಧರಿಸಿದ್ದರಿಂದ ಹತ್ಯೆಕೋರರ ಗುರುತು ಪತ್ತೆಯಾಗಿಲ್ಲ.
ಭಾರತದ ಜೈಲುಗಳಲ್ಲಿ ಸೆರೆಯಾಗಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಭಯೋತ್ಪಾದಕ ಗುಂಪಿನ ನಾಯಕ ಅಲ್ ಉಮರ್ ಮುಜಾಹಿದ್ದೀನ್, ಮುಷ್ತಾಕ್ ಅಹ್ಮದ್ ಜರ್ಗರ್ ಮತ್ತು ಬ್ರಿಟನ್ ಮೂಲದ ಅಲ್-ಖೈದಾ ನಾಯಕ ಅಹ್ಮದ್ ಒಮರ್ ಸಯೀದ್ ರನ್ನು ಬಿಡಿಸಿಕೊಳ್ಳಲು ಸಂಚು ರೂಪಿಸಿದ್ದ ಉಗ್ರರು, 1999 ರಲ್ಲಿ ಭಾರತದ ಏರ್ ಇಂಡಿಯಾ ವಿಮಾನವನ್ನುಅಪಹರಿಸಿದ್ದರು.
ನಂತರ ವಿಮಾನವನ್ನು ನೇಪಾಳದ ಕಠ್ಮಂಡುವಿನಿಂದ ಅಫ್ಘಾನಿಸ್ತಾನದ ಕಂಡಹಾರ್ ಗೆ ವಿಮಾನವನ್ನು ಕೊಂಡೊಯ್ದಿದ್ದರು. ವಿಮಾನದಲ್ಲಿದ್ದ 176 ಪ್ರಯಾಣಿಕರನ್ನು 7 ದಿನಗಳ ಕಾಲ ಒತ್ತೆಯಾಗಿರಿಸಿಕೊಳ್ಳಲಾಗಿತ್ತು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಈ ದಾಳಿಗೆ ಎಲ್ಲಾ ರೀತಿಯ ನೆರವು ಒದಗಿಸಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ