ಹೊಸದಿಗಂತ ವರದಿ ಶ್ರೀಶೈಲ, ಬಾಗಲಕೋಟೆ
ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಬುಧವಾರ ರಾತ್ರಿ ಕುಡಿಯುವ ನೀರಿನ ಬಾಟಲ್ ಖರೀದಿ ವೇಳೆ ನಡೆದ ವಾದ- ವಿವಾದಗಳು ವಿಕೋಪಕ್ಕೆ ತಿರುಗಿ ಘರ್ಷಣೆ ಸಂಭವಿಸಿದ್ದು ಈ ವೇಳೆ ದುಷ್ಕರ್ಮಿಗಳ ದಾಳಿಗೆ ಕರ್ನಾಟಕದ 200 ಕ್ಕೂ ಹೆಚ್ಚು ವಾಹನಗಳ ಜಖಂಗೊಂಡಿವೆ.
ಆಂದ್ರಪ್ರದೇಶದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವರ ದರ್ಶನಕ್ಕೆ ಕರ್ನಾಟಕದಿಂದ ತೆರಳಿರುವ ಭಕ್ತರು ಶ್ರೀಶೈಲದಲ್ಲಿ ವಾಸ್ತವ್ಯ ಹೂಡಿದ್ದರು. ಬುಧವಾರ ರಾತ್ರಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ತೆಗ್ಗಿ ಗ್ರಾಮದ ವ್ಯಕ್ತಿಯೊಬ್ಬರು ಸ್ಥಳೀಯ ಅಂಗಡಿಯೊಂದರಲ್ಲಿ ನೀರಿನ ಬಾಟಲ್ ಖರೀದಿಸಿದ್ದಾರೆ, ಈ ವೇಳೆ ಅಂಗಡಿಯಾತ ದುಪ್ಪಟ್ಟು ದರ ಕೇಳಿದ್ದು ವಾದ ವಿವಾದಕ್ಕೆ ತಿರುಗಿ ಪರಸ್ಪರ ಕೈ ಮಿಲಾಯಿಸಉವ ಹಂತಕ್ಕೆ ಹೋಗಿದೆ. ಈ ಗಲಾಟೆ ವೇಳೆ ತೆಗ್ಗಿ ಗ್ರಾಮದ ವ್ಯಕ್ತಿಯ ತಲೆಗೆ ಏಟುಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಒಗ್ಗೂಡಿದ ಶ್ರೀಶೈಲದ ವ್ಯಾಪಾರಸ್ಥರು ಕರ್ನಾಟಕದ ನಂಬರ್ ಪ್ಲೇಟ್ ಹೊಂದಿರುವ 200 ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಕ್ರೂಸರ್ , ಕಾರುಗಳು, ವ್ಯಾನ್ ಗಳ ಗಾಜುಗಳನ್ನು ಸಂಪೂರ್ಣವಾಗಿ ಒಡೆದು ಹಾಕಲಾಗಿದೆ.
ಕೋವಿಡ್ ಹಿನ್ನಲೆಯಲ್ಲಿ ಎರಡು ವರ್ಷದಿಂದ ಶ್ರೀಶೈಲ ಯಾತ್ರೆಗೆ ಜನರು ತೆರಳಲು ಸಾಧ್ಯವಾಗಿರಲಿಲ್ಲ. ಈಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ದಿಂದ ಲಕ್ಷಾಂತರ ಜನ ಶ್ರೀಶೈಲಕ್ಕೆ ಹೋಗಿದ್ದಾರೆ. ಹಲವು ವರ್ಷಗಳಿಂದ ಭಕ್ತರು ಇಲ್ಲಿಗೆ ದರ್ಶನಕ್ಕೆ ಹೋಗುತ್ತಾರೆ. ಆದರೆ ಇದೇ ಮೊದಲ ಬಾರಿ ಇಂತಹ ದುರ್ಘಟನೆ ನಡೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ