ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಆಡಳಿತದ ಚುಕ್ಕಾಣಿ ಹಿಡಿದು 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ‘ಬಲಿಷ್ಠ ಕರ್ನಾಟಕ’ ನಿರ್ಮಾಣಕ್ಕಾಗಿ 3 ಮಹಾ ಸಂಕಲ್ಪಗಳು ಹಾಗೂ 9 ಪ್ರಮುಖ ಗುರಿಗಳನ್ನು ಘೋಷಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ ಸಶಕ್ತ, ತಂತ್ರಜ್ಞಾನದಲ್ಲಿ ಮುನ್ನಡೆ, ಆರ್ಥಿಕವಾಗಿ ಸದೃಢ ಹಾಗೂ ಮೌಲ್ಯಗಳನ್ನು ಆಧರಿಸಿದ ಕರ್ನಾಟಕ ನಿರ್ಮಾಣವೇ ನಮ್ಮ ಗುರಿ ಎಂದರು.
ಏನಿದು 3 ಸಂಕಲ್ಪ?
- 2037ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು ಈಗಿನ 0.343 ಟ್ರಿಲಿಯನ್ ಡಾಲರ್ನಿಂದ 1 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವುದು.
- ಬಡತನ ಹಾಗೂ ಶಾಲಾ ತೊರೆಯುವಿಕೆಯನ್ನು ಶೂನ್ಯಕ್ಕೆ ತರುವುದು.
- ಅಪೌಷ್ಟಿಕತೆಯನ್ನು ಶೇ.5ಕ್ಕಿಂತ ಕಡಿಮೆಗೊಳಿಸುವುದು.
ಇದನ್ನೂ ಓದಿ:
ಪ್ರಮುಖ ಗುರಿಗಳು ಏನು?
- ವಸತಿಹೀನರಿಗೆ 5 ಲಕ್ಷ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ.
- ಜಾಗತಿಕ ಹೂಡಿಕೆ ಮತ್ತು ಅನಿವಾಸಿ ಭಾರತೀಯರ ವ್ಯವಹಾರಗಳ ಇಲಾಖೆಯ ಮೂಲಕ C&I ಹಾಗೂ ITBT ಇಲಾಖೆಗಳ ಸಹಯೋಗದಲ್ಲಿ 3 ಲಕ್ಷ ಕೋಟಿ ಹೊಸ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ.
- ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪುನಶ್ಚೇತನ, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಕೈಗೆಟುಕುವ ಗುಣಮಟ್ಟದ ಸಾರ್ವಜನಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು.
- ಕೈಗೆಟುಕುವ ಹಾಗೂ ಅತ್ಯಾಧುನಿಕ ಚಿಕಿತ್ಸೆ, ಆರೋಗ್ಯ ಮೂಲಸೌಕರ್ಯ, ಮುಖ್ಯಮಂತ್ರಿಗಳ ಹೊಸ ವಿಮಾ ಯೋಜನೆ ಮತ್ತು ಆರೋಗ್ಯ ಪ್ರವಾಸೋದ್ಯಮಕ್ಕಾಗಿ ಮೆಡಿಸಿಟಿ ನಿರ್ಮಾಣಕ್ಕೆ ಒತ್ತು ನೀಡಲಾಗುವುದು.
- ಮೇಕೆದಾಟು, ಕೃಷ್ಣ ಮೇಲ್ದಂಡೆ ಯೋಜನೆಗಳಿಗೆ ವೇಗ ನೀಡುವುದರ ಜೊತೆಗೆ ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಿ, ರಾಜ್ಯದ ಜಲಮೂಲಗಳ ಪುನಶ್ಚೇತನ ಕೈಗೊಳ್ಳಲಾಗುವುದು.
- ಬೆಂಗಳೂರಿನಾಚೆ ಅಭಿವೃದ್ಧಿಗೆ ಐದು ಹೊಸ ಪ್ರಮುಖ ನಗರಗಳ ನಿರ್ಮಾಣಕ್ಕೆ ಒತ್ತು.
- ಐದು ಹೊಸ ಲಾಲ್ಬಾಗ್ಗಳ ನಿರ್ಮಾಣ ಹಾಗೂ ಏಳು ಕೆರೆಗಳ ಪುನಶ್ಚೇತನಕ್ಕೆ ಯೋಜನೆ.
- ರಾಜ್ಯದಲ್ಲಿ 1 ಲಕ್ಷ ಸರ್ಕಾರಿ ಹಾಗೂ 5 ಲಕ್ಷ ಖಾಸಗಿ ಉದ್ಯೋಗ ಸೃಷ್ಟಿಸುವ ಜೊತೆಗೆ ಭೂ ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.
- ಮುಂದಿನ 500 ದಿನಗಳಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ 1.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡುವ ‘ಬಿಲ್ಡ್ ಕರ್ನಾಟಕ’ ಯೋಜನೆ ಜಾರಿಗೊಳಿಸಲಾಗುವುದು.



