– ಜಗದೀಶ ಎಂ.ಗಾಣಿಗೇರ
ಬಾಗಲಕೋಟೆ ತಾಲೂಕಿನ ಮುಚಖಂಡಿ ಎಲ್.ಟಿ.ಗ್ರಾಮದ ಇಬ್ಬರು ಯುವಕರು ದೇಶದ ವಿವಿಧ ಭಾಗಗಳಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸಲು 10,332 ಕಿ.ಮೀ. ಬೈಕ್ ಸವಾರಿ ಮಾಡಿ ಯಶಸ್ವಿಯಾಗಿ ತವರಿಗೆ ಬಂದಿದ್ದಾರೆ.
ಕಳೆದ ಜೂನ್ 17ರಂದು ಮುಚಖಂಡಿ ಎಲ್.ಟಿಯಿಂದ ಬೈಕ್ ಸವಾರಿ ಆರಂಭಿಸಿದ ಸಂಜಯಕುಮಾರ ಎಚ್. ಮತ್ತು ವಿಶಾಲಾ ಎಸ್.ರಾಠೋಡ ಎಂಬ ಇಬ್ಬರು ಯುವಕರು ಮಹಾರಾಷ್ಟ್ರ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ,ಉತ್ತರ ಪ್ರದೇಶ, ಪಂಜಾಬ, ಜಮ್ಮು ಕಾಶ್ಮೀರ, ಅರುಣಾಚಾಲ ಪ್ರದೇಶದಲ್ಲಿ ಸಂಚರಿಸಿ ನಂತರ ಪಾಕಿಸ್ಥಾನ, ಚೈನಾ ಮತ್ತು ನೇಪಾಳ ಗಡಿಭಾಗದಲ್ಲಿಯೂ ಕೂಡ ಸಂಚರಿಸಿದ ಪರಿಸರ ಕುರಿತು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.
ರಾಜ್ಯದ ಹಾಗೂ ದೇಶದ ವಿವಿಧ ರಾಜ್ಯಗಳಿಗೆ ಹೋದ ಸಂದರ್ಭದಲ್ಲಿ ಕನ್ನಡಿಗರು ಅಲ್ಲಿ ಅವರಿಗೆ ಸಹಕಾರ ನೀಡಿದ್ದು, ಇನ್ನೂ ದೇಶದ ಗಡಿಭಾಗಗಳಲ್ಲಿ ಸಂಚರಿಸಿದಾಗ ಇಬ್ಬರೂ ಯುವಕರಿಗೆ ದೇಶ ಕಾಯುವ ಸೈನಿಕರೂ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೈಕ್ ಸಂಚಾರ ಮಾಡುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಕ್ಕೂ ಕೂಡ ಭೇಟಿ ನೀಡಿ ಮರಗಳನ್ನು ಕಡಿಯುವುದರಿಂದ ಆಗುವ ಪರಿಸರ ನಾಶ ಮತ್ತು ಮರ ಬೆಳೆಸುವುದರಿಂದ ಆಗುವ ಲಾಭದ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ಸಂಜಯಕುಮಾರ ಎಚ್. ಪತ್ರಿಕೆಗೆ ತಿಳಿಸಿದ್ದಾರೆ.