ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದ್ದು, ದಿನೇ ದಿನೆ ಹೆಚ್ಚುತ್ತಿರುವ ಹಣದುಬ್ಬರದಿಂದ ಜನ ಹಸಿವಿನಿಂದ ಬಳಲುತ್ತಿದ್ದಾರೆ. ಜನರಿಗಾಗಿ ಸರ್ಕಾರ ಆಹಾರದ ವ್ಯವಸ್ಥೆ ಮಾಡಿದ್ದು, ಸರ್ಕಾರಿ ವಿತರಣಾ ಕೇಂದ್ರಗಳಲ್ಲಿ ಉಚಿತ ಹಿಟ್ಟುಗಳನ್ನು ನೀಡುವ ಯೋಜನೆಯನ್ನು ಆರಂಭಿಸಿದೆ.
ಆಹಾರದ ಅಭಾವದಿಂದ ಉಚಿತ ಗೋಧಿಹಿಟ್ಟು ಪಡೆಯಲು ಜನ ಮುಗಿಬಿದ್ದಿದ್ದು, ನೂಕು ನುಗ್ಗಲಿನಿಂದ ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದಲ್ಲಿ ಮಹಿಳೆಯರೂ ಸೇರಿ 11 ಮಂದಿ ಮೃತಪಟ್ಟಿದ್ದಾರೆ.
ದಕ್ಷಿಣ ಪಂಜಾಬ್ನ ಸಾಹಿವಾಲ್, ಬಹವಾಲ್ಪುರ್, ಮುಜಾಫರ್ಗಢ, ಒಕಾರಾ, ಫಸಿಲಾಬಾದ್, ಜೆಹಾನಿಯನ್ ಮತ್ತು ಮುಲ್ತಾನ್ ಜಿಲ್ಲೆಗಳಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇವೆ. ಉಚಿತ ಹಿಟ್ಟು ಸಿಗದೇ ಹೋದರೆ ಮನೆಯಲ್ಲಿ ಹಸಿವಿನಿಂದ ಮಕ್ಕಳು ಮಲಗಬೇಕಾಗುತ್ತದೆ ಎಂದು, ಹಿಟ್ಟು ಖಾಲಿ ಆಗಿಬಿಟ್ಟರೆ ಎನ್ನುವ ಆತಂಕದಲ್ಲಿ ತಳ್ಳಾಟ ನಡೆದಿದೆ.
ಹಸಿವಿನ ತೀವ್ರತೆ ಎಷ್ಟಿದೆ ಎಂದರೆ ಮುಜಾಫರ್ಘರ್ ಹಾಗೂ ರಹೀಮ್ ಯಾರ್ ಖಾನ್ ನಗರಗಳಲ್ಲಿ ಜನ ಹಿಟ್ಟನ್ನು ಸಾಗಿಸುತ್ತಿದ್ದ ಟ್ರಕ್ನ್ನು ದರೋಡೆ ಮಾಡಲು ಯತ್ನಿಸಿದ್ದಾರೆ. ಸರತಿ ಸಾಲಿನಲ್ಲಿ ನಿಲ್ಲದೇ ಎಲ್ಲರೂ ಒಟ್ಟಿಗೇ ನುಗ್ಗಿದ್ದು, ಜನರನ್ನು ಸುಧಾರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.