ಹೊಸದಿಗಂತ ಡಿಜಿಟಲ್ ಡೆಸ್ಕ್:
18 ಸಾವಿರ ರೂಪಾಯಿಗಾಗಿ 14ವರ್ಷದ ಬಾಲಕನನ್ನು ಐವರು ಯುವಕರು ಬರ್ಬರವಾಗಿ ಕೊಂದು ಚರಂಡಿಗೆ ಎಸೆದಿದ್ದಾರೆ. ದೆಹಲಿಯ ಶಾಬಾದ್ ಡೈರಿ ಪ್ರದೇಶದಲ್ಲಿ ಈ ಭಯಾನಕ ಘಟನೆ ನಡೆದಿದೆ. ಮೃತನನ್ನು ಮಂಜೀತ್ ಎಂದು ಗುರುತಿಸಲಾಗಿದ್ದು, ಮೃತ ದೇಹವನ್ನು ತಕ್ಷಣ ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು.
ಮಂಜೀತ್ ಕಾಣೆಯಾಗಿದ್ದಾನೆ ಎಂದು ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜನವರಿ 19 ರಂದು ದೂರು ನೀಡಿದ್ದರು. ಜನವರಿ 8 ರಂದು ತಮ್ಮ ಮಗ ಮನೆಯಿಂದ ಹೋಗಿದ್ದವನು ಮತ್ತು ಹಿಂತಿರುಗಲಿಲ್ಲ ಎಂದು ಹೇಳಿದರು. 14 ವರ್ಷದ ಬಾಲಕನ ಶವ ಪತ್ತೆಯಾದ ಬಳಿಕ ಮಂಜೀತ್ ಪೋಷಕರನ್ನು ಕರೆಸಲಾಗಿತ್ತು.
ಅದು ಮಂಜೀತ್ನ ಶವ ಎಂದು ಗುರುತಿಸಿ, ತನಿಖೆಯ ನಂತರ ಹರ್ಷಿತ್, ವಿಕ್ರಮ್, ವಿಪಿನ್ ಮತ್ತು ಪಂಕಜ್ ಎಂಬ ನಾಲ್ವರು ಯುವಕರನ್ನು ಬಂಧಿಸಲಾಗಿದೆ. ಹರ್ಷಿತ್ ಮತ್ತು ವಿಕ್ರಮ್ ಶಾಬಾದ್ ಡೈರಿ ಪ್ರದೇಶದ ಡಿ ಬ್ಲಾಕ್ನಲ್ಲಿ ಬಟ್ಟೆ ಅಂಗಡಿ ಹೊಂದಿದ್ದು, ಮಂಜೀತ್ ಅವರಿಂದ 18,000 ರೂಪಾಯಿ ಮೌಲ್ಯದ ಬಟ್ಟೆಗಳನ್ನು ತೆಗೆದುಕೊಂಡು ಹಣ ನೀಡದೆ ಇರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ಹಣ ನೀಡುವುದಾಗಿ ಮಂಜೀತ್ ಹೇಳುತ್ತಲೇ ಇದ್ದು, ಪದೇ ಪದೇ ಕೇಳಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಗಳು ತಿಳಿಸಿದ್ದಾರೆ. ಹರ್ಷಿತ್, ವಿಕ್ರಮ್ ಮತ್ತು ಇತರ ಮೂವರು ಇತ್ತೀಚೆಗೆ ಮಂಜೀತ್ ಜೊತೆ ಜಗಳವಾಡಿ ಆತನನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಅವನಿಗಾಗಿ ಶೋಧ ನಡೆಸಲಾಗಿದೆ ಉಳಿದವರನ್ನು ಬಂಧಿಸಲಾಗಿದೆ.