ದಸರಾಗೆಂದು ಸರ್ಕಾರದಿಂದ 15 ಕೋಟಿ ರೂ ಬಿಡುಗಡೆ: ಸಚಿವ ಡಾ. ಹೆಚ್ ಸಿ ಮಹದೇವಪ್ಪ

ಹೊಸದಿಗಂತ ವರದಿ,ಮೈಸೂರು:

ಮಳೆಯಿಲ್ಲದೆ ರಾಜ್ಯದಲ್ಲಿ ಬರಗಾಲ ಆವರಿಸಿರುವ ಕಾರಣ ಈ ಬಾರಿ ಸಾಂಪ್ರದಾಯಿಕವಾಗಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ನಡೆಸಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ 15 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಮಂಗಳವಾರ ಮೈಸೂರು ಅರಮನೆ ಮಂಡಳಿಯಲ್ಲಿ ದಸರಾ ಸಾಂಸ್ಕೃತಿಕ ಉಪ ಸಮಿತಿಯ ವತಿಯಿಂದ ತಯಾರಿಸಲಾದ ಪೋಸ್ಟರ್ಸ್ ಹಾಗೂ ದಸರಾ ವೆಬ್ ಸೈಟ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಾಂಪ್ರದಾಯಕ ದಸರಾ ಆಚರಣೆಯನ್ನು ವ್ಯವಸ್ಥಿತವಾಗಿ ಮಾಡಲು, ಸರ್ಕಾರಕ್ಕೆ 40 ಕೋಟಿರೂಗಳ ಅನುದಾನವನ್ನು ಕೇಳಲಾಗಿತ್ತು. ಆದರೆ ಬರಗಾಲದ ಪರಿಸ್ಥಿತಿಯಿಂದಾಗಿ 30 ಕೋಟಿರೂ ವೆಚ್ಚದೊಳಗೆ ದಸರಾವನ್ನು ಮಾಡಲು ನಿರ್ಧರಿಸಲಾಗಿದೆ. ಖರ್ಚು ಕಡಿಮೆ ಮಾಡಲು ಪ್ರಾಯೋಕತ್ವವನ್ನುಹಲವು ಕಾರ್ಯಕ್ರಮಗಳಿಗೆ ಆಯೋಜಿಸಲು ನಿರ್ಧರಿಸಿದ್ದು, ಈಗಾಗಲೇ ಪ್ರಾಯೋಜಕ ಕಂಪನಿಗಳೊoದಿಗೆ ಮಾತಕತೆ ನಡೆಸಲಾಗಿದೆ ಎಂದು ಹೇಳಿದರು.

ಈಗಾಗಲೇ 18 ವಿವಿಧ ದಸರಾ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಈ ಬಾರಿ ಹಿಂದಿನ ಅರಮನೆಯ ವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ 250 (ಸೆರಮೊನಿ ಡ್ರೆಸ್) ಸಮವಸ್ತ್ರಗಳಿಗಾಗಿ ಟೆಂಡರ್ ಕರೆಯಲಾಗುವುದು. ಜಿಲ್ಲಾಮಟ್ಟದಲ್ಲಿ ರೈತ ದಸರಾವನ್ನು ಆಯೋಜಿಸಿ. ರೈತ ದಸರಾದಲ್ಲಿ ರೈತರಿಗೆ ಉಪಯೋಗವಾಗುವ ಮಣ್ಣಿನ ಫಲವತ್ತತೆ, ಮಿಶ್ರ ಬೆಳೆ, ಪರ್ಯಾಯ ಬೆಳೆ ಹಾಗೂ ಆರ್ಥಿಕ ಅಭಿವೃದ್ಧಿ, ಜಿಡಿಪಿ ಮುಂತಾದ ವಿಚಾರಗಳನ್ನು ಒಳಗೊಂಡ ವಿಚಾರ ಸಂಕಿರಣಗಳನ್ನು ಆಯೋಜಿಸಿ ಎಂದು ತಿಳಿಸಿದರು.

ಈ ವೇಳೆ ಸಾಂಸ್ಕೃತಿಕ, ಕ್ರೀಡಾ, ಲಲಿತಕಲಾ, ಕವಿಗೋಷ್ಠಿ, ಗ್ರಾಮೀಣ ದಸರಾ, ಯೋಗಾದಸರಾ ಮಹಿಳಾ ಹಾಗೂ ಮಕ್ಕಳ ದಸರಾ, ಆಹಾರ ಮೇಳ ಚಲನ ಚಿತ್ರೋತ್ಸವ, ಯುವ ಸಂಭ್ರಮ ಹಾಗೂ ಯುವ ದಸರಾ ಸೇರಿದಂತೆ ವಿವಿಧ ದಸರಾ ಉಪ ಸಮಿತಿಗಳ ಅಧಿಕಾರಿಗಳೊಟ್ಟಿಗೆ ಸದಸ್ಯರೊಟ್ಟಿಗೆ ಚರ್ಚಿಸಿದರು.

ಸಭೆಯಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಅಪರ ಮುಖ್ಯ ಕಾರ್ಯದರ್ಶಿ ಮಂಜುಳಾ, ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗಾಯತ್ರಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಆಶಾದ್ ಊರ್ ರೆಹಮಾನ್ ಶರೀಫ್, ಕೆಡಿಪಿ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ದಸರಾ ಉಪ ಸಮಿತಿಗಳ ನೋಡಲ್ ಅಧಿಕಾರಿಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!