ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಜಕಿಸ್ತಾನದ ಗಣಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಣಿ ನಿರ್ವಹಿಸುವ ಲಕ್ಸೆಂಬರ್ಗ್ ಮೂಲದ ಉಕ್ಕು ತಯಾರಕ ಆರ್ಸೆಲರ್ ಮಿತ್ತಲ್ ಟೆಮಿರ್ಟೌ ಕಂಪನಿಯು ಶನಿವಾರ ತಿಳಿಸಿದೆ.
ಈ ಘಟನೆಯಲ್ಲಿ ಹದಿನೆಂಟು ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಕೊಸ್ಟೆಂಕೊ ಗಣಿಯಲ್ಲಿದ್ದ 252 ಜನರಲ್ಲಿ 205 ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು 31 ಜನರು ನಾಪತ್ತೆಯಾಗಿದ್ದಾರೆ ಎಂದು ಕಂಪನಿಯು ತಿಳಿಸಿದೆ.
ಈ ಘಟನೆಯ ಕುರಿತಾಗಿ ಕಜಕಿಸ್ತಾನದ ಅಧ್ಯಕ್ಷ ಕಾಸಿಮ್-ಜೊಮಾರ್ಟ್ ಟೊಕಯೆವ್ ಸಂತ್ರಸ್ತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆರ್ಸೆಲರ್ ಮಿತ್ತಲ್ ಟೆಮಿರ್ಟೌ ಅವರೊಂದಿಗಿನ ಹೂಡಿಕೆ ಸಹಕಾರವನ್ನು ನಿಲ್ಲಿಸುವಂತೆ ತಮ್ಮ ಕ್ಯಾಬಿನೆಟ್ಗೆ ಆದೇಶ ಹೊರಡಿಸಿದ್ದಾರೆ.
ದೇಶದ ಅತಿ ದೊಡ್ಡ ಉಕ್ಕಿನ ಕಾರ್ಖಾನೆಯನ್ನು ನಡೆಸುತ್ತಿರುವ ಕಂಪನಿಯನ್ನು ರಾಷ್ಟ್ರೀಕರಣಗೊಳಿಸುವ ಒಪ್ಪಂದವನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಕಜಕ್ ಸರ್ಕಾರ ತಿಳಿಸಿದೆ.