ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಲಕ್ನೋದಲ್ಲಿರುವ ಮದರಸಾದಲ್ಲಿ ಇಬ್ಬರು ಮಕ್ಕಳ ಕಾಲಿಗೆ ಸರಪಳಿ ಹಾಕಿ ಕ್ರೌರ್ಯ ಮೆರೆದಿದ್ದಾರೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿ ಪೊಲೀಸರ ಗಮನಕ್ಕೆ ತಂದ ಬಳಿಕ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ನೋಡಿದ ಪೊಲೀಸರು ಸ್ಥಳಕ್ಕಾಗಮಿಸಿ ಮದರಸಾದ ಮೌಲಾನಾ ಅವರನ್ನು ಬಂಧಿಸಿ, ಮಕ್ಕಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಈ ಬಗ್ಗೆ ಮಕ್ಕಳ ಪೋಷಕರು ಸ್ಪಷ್ಟನೆ ನೀಡಿದ್ದು ಇದರಲ್ಲಿ ಮೌಲಾನಾ ಅವರಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳಿದ್ದಾರೆ.
ವಿದ್ಯಾಭ್ಯಾಸ ಮಾಡಲು ಇಷ್ಟವಿಲ್ಲದೆ ಓಡಿಹೋಗುತ್ತಿದ್ದ ಮಕ್ಕಳನ್ನು ತಮ್ಮ ದಾರಿಗೆ ತರಲು ಈ ನಿರ್ಧಾರ ಮಾಡಿರುವುದಾಗಿ ಪೋಷಕರು ತಿಳಿಸಿದ್ದಾರೆ. ತಮ್ಮ ಇಬ್ಬರು ಮಕ್ಕಳನ್ನು ಮದರಸಾದಲ್ಲಿ ಓದಲು ತಾವೇ ಸೇರಿಸಿದ್ದಾಗಿ, ಮಕ್ಕಳಿಬ್ಬರೂ ಮದರಸಾದಿಂದ ಓಡಿಹೋಗದಂತೆ ನೋಡಿಕೊಳ್ಳಲು ಮೌಲಾನಾಗೆ ಮನವಿ ಮಾಡಿದ್ದೆವು ಎಂದಿದ್ದಾರೆ.
ಇವರಿಬ್ಬರ ವಿಚಾರದಲ್ಲಿ ತುಸು ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಪೋಷಕರೇ ಸಲಹೆ ನೀಡಿದ್ದರಂತೆ. ಪೋಷಕರ ಮನವಿ ಮೇರೆಗೆ ಮೌಲಾನಾ ಮಕ್ಕಳನ್ನು ಸರಪಳಿಯಿಂದ ಬಂಧಿಸಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಕ್ಕಳ ಪೋಷಕರು ಪೊಲೀಸರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ನಾವು ಹೇಳಿದ್ದಕ್ಕೇ ಮೌಲಾನಾ ತಮ್ಮ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿ ವರ್ತಿಸಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಕ್ಕಳು ಕೂಡಾ ಪ್ರತಿಕ್ರಿಯೆ ನೀಡಿದ್ದು, ವಿದ್ಯಾಭ್ಯಾಸ ಇಷ್ಟವಿಲ್ಲದ ಕಾರಣ ಈ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ವಿ, ಒಮ್ಮೆ ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡಿದ್ದಾಗಿ ಮಕ್ಕಳು ಉತ್ತರಿಸಿದ್ದಾರೆ.