ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜಸ್ಥಾನದ ಅಜ್ಮೀರ್ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ಸಮಾಧಿ ಒಂದು ಕಾಲದಲ್ಲಿ ದೇವಸ್ಥಾನವಾಗಿತ್ತು ಎಂದು ಪ್ರತಿಪಾದಿಸಿರುವ ಹಿಂದೂ ಸಂಘಟನೆಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದೆ.
ಈ ಕುರಿತು ಮಾತನಾಡಿರುವ ಮಹಾರಾಣಾ ಪ್ರತಾಪ್ ಸೇನೆಯ ರಾಜವರ್ಧನ್ ಸಿಂಗ್ ಪರ್ಮಾರ್ ಅವರು, ದರ್ಗಾದ ಗೋಡೆಗಳು ಮತ್ತು ಕಿಟಕಿಗಳ ಮೇಲೆ ಹಿಂದೂ ಧರ್ಮದ ಚಿಹ್ನೆಗಳು ಇವೆ ಎಂದು ಪ್ರತಿಪಾದಿಸಿದ್ದಾರೆ.
ʼಖ್ವಾಜಾ ಗರೀಬ್ ನವಾಜ್ ಅವರ ದರ್ಗಾ ಹಿಂದೆ ಪ್ರಾಚೀನ ಹಿಂದೂ ದೇವಾಲಯವಾಗಿತ್ತು. ಗೋಡೆಗಳು ಮತ್ತು ಕಿಟಕಿಗಳ ಮೇಲೆ ಸ್ವಸ್ತಿಕ ಚಿಹ್ನೆಗಳು ಇವೆ. ದರ್ಗಾದ ಸಮೀಕ್ಷೆಯನ್ನು ಎಎಸ್ಐ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಪರ್ಮಾರ್ ಸುದ್ದಿಗಾರೊಂದಿಗೆ ಮಾತನಾಡುತ್ತಾ ತಿಳಿಸಿದರು.
ದರ್ಗಾದಲ್ಲಿ ಅಂತಹ ಯಾವುದೇ ಚಿಹ್ನೆ ಇಲ್ಲ, ಇದೊಂದು ನಿರಾಧಾರ ಆರೋಪವಾಗಿದೆ ಎಂದು ಮೊಯಿನ್ ಚಿಸ್ತಿಯ ಅಂಜುಮನ್ ಸೈಯದ್ ಝಡ್ಗಾನ್ ಹೇಳಿದ್ದಾರೆ. ಇದೊಂದು ಧಾರ್ಮಿಕ ಸೌಹಾರ್ದತೆಯ ಕ್ಷೇತ್ರವಾಗಿದ್ದು ಪ್ರತಿ ವರ್ಷ ಲಕ್ಷಾಂತರ ಜನರು ಹಿಂದೂಗಳು ಮತ್ತು ಮುಸ್ಲಿಮರು ಭೇಟಿ ನೀಡುತ್ತಾರೆ ಎಂದು ಅವರು ಹೇಳಿದರು.
850 ವರ್ಷಗಳಿಂದ ದರ್ಗಾ ಇದೆ ಈ ವರೆಗೆ ಅಂತಹ ಪ್ರಶ್ನೆಯೇ ಉದ್ಭವಿಸಲಿಲ್ಲ. ಹಿಂದೆಂದೂ ಇರದಂತಹ ವಾತಾವರಣ ಇದೀಗ ದೇಶದಲ್ಲಿದೆ ಎಂದರು.
ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಸಮಾಧಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುವುದೆಂದರೆ ಅಲ್ಲಿ ಅವರ ಧರ್ಮವನ್ನು ಲೆಕ್ಕಿಸದೆ ಪ್ರಾರ್ಥನೆ ಸಲ್ಲಿಸುವ ಕೋಟ್ಯಂತರ ಜನರ ಭಾವನೆಗಳನ್ನು ನೋಯಿಸುವುದು ಎಂದರ್ಥ. ಸರ್ಕಾರ ಈ ಕುರಿತು ಗಮನ ಹರಿಸಬೇಕು ಎಂದು ಹೇಳಿದರು.
ಸಮಾಧಿಯ ಕಾರ್ಯದರ್ಶಿ ವಾಹಿದ್ ಹುಸೇನ್ ಚಿಸ್ತಿ ಅವರು ಈ ಹೇಳಿಕೆಯನ್ನು ಕೋಮು ಸೌಹಾರ್ದತೆ ಕದಡುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ