ಹೊಸದಿಗಂತ ವರದಿ ಶಿವಮೊಗ್ಗ:
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಿಂದ ಶಿವಮೊಗ್ಗ ಸೇರಿದಂತೆ ರಾಜ್ಯದ ಜನರಿಗೆ ಪ್ರಯೋಜನವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರಕ್ಕೆ ದೊಡ್ಡ ಮಟ್ಟದ ಹಾನಿಯಾಗುವುದಿಲ್ಲ. ಕೇವಲ 25 ಎಕರೆ ಪ್ರದೇಶ ಮಾತ್ರ ಪಂಪ್ ಹೌಸ್ಗೆ ಬೇಕಾಗಲಿದೆ. ಪೈಪ್ಲೈನ್ ಅಳವಡಿಸಿದ ಬಳಿಕ ಮತ್ತೆ ಮಣ್ಣಿನಿಂದ ಮುಚ್ಚಿ ಅರಣ್ಯವನ್ನು ಪುನಃ ಬೆಳೆಸಲಾಗುತ್ತದೆ. ಯೋಜನೆಯಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ ಸುಮಾರು 2,000 ಮೆಗಾವ್ಯಾಟ್ ವಿದ್ಯುತ್ ದೊರೆಯಲಿದೆ ಎಂದರು.
ಯೋಜನೆಗಾಗಿ 125 ಎಕರೆ ಪ್ರದೇಶ ಬಳಸಲಾಗುತ್ತದೆ ಎಂಬ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿ, ಅಷ್ಟೂ ಪ್ರದೇಶ ಮುಳುಗುವುದಿಲ್ಲ. ಪೈಪ್ಲೈನ್ ಕಾಮಗಾರಿಗೆ ಹೆಚ್ಚಿನ ಜಾಗ ಬೇಕಾಗಲಿದೆ. ಕೇವಲ 25 ರಿಂದ 30 ಎಕರೆ ಮಾತ್ರ ಪಂಪ್ ಹೌಸ್ಗೆ ಶಾಶ್ವತವಾಗಿ ಬಳಸಲಾಗುತ್ತದೆ. ನಿರಂತರವಾಗಿ ನೀರನ್ನು ಮರುಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದು ಎಂದರು.
ಇದನ್ನೂ ಓದಿ:
ರಾಷ್ಟ್ರೀಯ ಮಟ್ಟದ ತಜ್ಞರ ಸಮಿತಿಯೂ ಅಧ್ಯಯನ ನಡೆಸಿ ಅನುಮೋದನೆ ನೀಡಿದ ಬಳಿಕವೇ ಕಾಮಗಾರಿ ಆರಂಭಿಸಲಾಗುತ್ತದೆ. ಎಲ್ಲಾ ಕಾನೂನು ಹಾಗೂ ಪರಿಸರ ನಿಯಮಗಳನ್ನು ಪಾಲಿಸಿಕೊಂಡೇ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಯೋಜನೆಯ ಸಂಪೂರ್ಣ ಮಾಹಿತಿ ತಿಳಿದರೆ ವಿರೋಧಿಸುವ ಅಗತ್ಯ ಇರುವುದಿಲ್ಲ. ಸರ್ಕಾರ ಯಾರ ಮೇಲೂ ಬಲವಂತವಾಗಿ ಯೋಜನೆ ಹೇರಲು ಮುಂದಾಗಿಲ್ಲ. ನಿಯಮಾನುಸಾರ ಅನುಮತಿ ದೊರೆತ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.



