ಹೊಸದಿಗಂತ ಡಿಜಿಟಲ್ ಡೆಸ್ಕ್
ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದ್ವಿತೀಯ ವಾರ್ಷಿಕ ಆರಾಧನೆ ಸೆಪ್ಟಂಬರ್ 14 ಬುಧವಾರದಂದು ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಲಿದೆ.
ಅಂದು ಬೆಳಗ್ಗೆ 7 ರಿಂದ ಮಹಾಪೂಜೆ, 9 ಗಂಟೆಗೆ ಧ್ವಜಾರೋಹಣ, ಕಾರ್ಯಕ್ರಮಗಳ ಉದ್ಘಾಟನೆ, ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಬಗ್ಗೆ ರಚಿಸಿದ ಕವನಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಎ.ಎನ್. ರಮೇಶ್ ಗುಬ್ಬಿ ಸಾಹಿತ್ಯ ರಚಿಸಿ ಶ್ರೀ ಆನೂರು ಅನಂತಕೃಷ್ಣ ಶರ್ಮಾ ಸಂಗೀತ ಸಂಯೋಜಿಸಿದ ಧ್ವನಿಚಕ್ರ ಗುರು ಗೀತ ಲಹರಿ ಬಿಡುಗಡೆ, 9.45 ರಿಂದ ವಿದ್ವಾನ್ ವಿಠಲ್ ರಾಮ ಮೂರ್ತಿ ಚೆನೈ, ವಿದ್ವಾನ್ ವಿವಿಎಸ್ ಮುರಾರಿ ಚೆನೈ ಅವರಿಂದ ದ್ವಂದ್ವ ವಯಲಿನ್ ವಾದನ. ಮೃದಂಗದಲ್ಲಿ ವಿದ್ವಾನ್ ಶ್ರೀಮುಷ್ಣ ರಾಜಾರಾಮ್ ಚೆನೈ, ಘಟಂನಲ್ಲಿ ಜಿ.ಎಸ್.ರಾಮಾನುಜಮ್ ಮೈಸೂರು, ಮೋರ್ಸಿಂಗ್ನಲ್ಲಿ ವಿದ್ವಾನ್ ಗೋವಿಂದ ಪ್ರಸಾದ್ ಪಯ್ಯನ್ನೂರು ಜೊತೆಗೂಡಲಿದ್ದಾರೆ. ಮಧ್ಯಾಹ್ನ ಮಹಾಪೂಜೆ, ವೃಂದಾವನ ಪೂಜೆ, ಅಪರಾಹ್ಣ 2 ಗಂಟಯಿಂದ ಮಂತ್ರಾಕ್ಷತೆ, 3 ರಿಂದ ಆರಾಧನೋತ್ಸವ ಮಹಾಸಭೆ ನಡೆಯಲಿದೆ.
ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಗುರುಸ್ಮರಣೆ ಮಾಡಲಿದ್ದಾರೆ. ಪ್ರಖ್ಯಾತ ವೈದ್ಯರುಗಳಾದ ಡಾ. ಬಿ.ಎಸ್. ರಾವ್ ಕಾಸರಗೋಡು ಹಾಗೂ ಡಾ.ರಮಾನಂದ ಬನಾರಿ ಅವರಿಗೆ ಶ್ರೀ ಕೇಶವಾನಂದ ಭಾರತೀ ಸ್ಮೃತಿಗೌರವ ಪ್ರದಾನ ನಡೆಯಲಿದೆ. ಅಭಿನಂದಿತರ ಕುರಿತು ಡಾ. ಪ್ರಭಾಕರ ಜೋಷಿ ಮತ್ತು ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಶುಭಾಶಂಸನಾ ನುಡಿಗಳನ್ನಾಡಲಿದ್ದಾರೆ. ಸಂಜೆ 5 ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಚಂದ್ರಾವಳಿ ವಿಲಾಸ, ಮಾಯಾ ಮಾರುತೇಯ, ಚೂಡಾಮಣಿ, ಮಕರಾಕ್ಷ ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ರಾತ್ರಿ 7 ಗಂಟೆಗೆ ಶ್ರೀ ದೇವರ ಪೂಜೆ, ವೃಂದಾವನ ಪೂಜೆ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ