ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ನುಹ್ ಜಿಲ್ಲೆಯಲ್ಲಿ ಎಂಟು ವರ್ಷದ ಬಾಲಕ ಸೇರಿದಂತೆ ಮೂವರು ಸೆಪ್ಟಿಕ್ ಟ್ಯಾಂಕ್ಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಬಿಚೋರ್ ಗ್ರಾಮದಲ್ಲಿ ಮಂಗಳವಾರ ಎಂಟು ವರ್ಷದ ಬಾಲಕ ಟ್ಯಾಂಕ್ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಟ್ಯಾಂಕ್ಗೆ ಬಿದ್ದಿದ್ದಾನೆ, ಬಾಲಕನನ್ನು ರಕ್ಷಿಸಲು ಆತನ ತಂದೆ ಹಾಗೂ ಮತ್ತೊಬ್ಬರು ಟ್ಯಾಂಕ್ಗೆ ಇಳಿದಿದ್ದಾರೆ. ದುರಾದೃಷ್ಟವಶಾತ್ ಮೂವರು ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗ್ರಾಮಸ್ಥರು ಹೇಳುವ ಪ್ರಕಾರ, ಗ್ರಾಮದ ದಿನು ಎಂಬುವವರ ಮನೆಯ ಹೊರಗೆ 20 ಅಡಿ ಆಳದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗಿದೆ. ಅದನ್ನು ಬಂಡೆಯಿಂದ ಮುಚ್ಚಲಾಗಿದೆ. ಮಂಗಳವಾರ ದಿನುವಿನ ಎಂಟು ವರ್ಷದ ಮೊಮ್ಮಗ ಅರಿಜ್ ಟ್ಯಾಂಕ್ ಮೇಲೆ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮೇಲೆ ಮುಚ್ಚಿದ ಬಂಡೆ ಒಡೆದುಹೋಗಿ ಬಾಲಕ ಅದರೊಳಗೆ ಬಿದ್ದಿದ್ದಾನೆ.
ಬಾಲಕನ ತಂದೆ ಸಿರಾಜ್ (30) ಮತ್ತು ಆತನ ಚಿಕ್ಕಪ್ಪ ಸಲಾಂ (35) ಬಾಲಕನನ್ನು ರಕ್ಷಿಸುವ ಪ್ರಯತ್ನದಲ್ಲಿ ಟ್ಯಾಂಕ್ನೊಳಗೆ ಇಳಿದಿದ್ದಾರೆ. ಬಹಳ ಹೊತ್ತಾದರೂ ಯಾರೂ ಹೊರಬರದ ಕಾರಣ ಕುಟುಂಬಸ್ಥರಲ್ಲಿ ಆತಂಕದಲ್ಲಿ ಮನೆ ಮಾಡಿತ್ತು. ಟ್ಯಾಂಕ್ನೊಳಗೆ ಮೂವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಕುಟುಂಬಸ್ಥರು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ ಎಂಬುದು ಗಮನಾರ್ಹ.