ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಡತ ವಿಲೇವಾರಿ ಸಪ್ತಾಹಕ್ಕೆ ಚಾಲನೆ ನೀಡಲಾಗಿದ್ದು, 10 ದಿನಗಳ ಅವಧಿಯಲ್ಲಿ ಬಾಕಿ ಇರುವ 82 ಸಾವಿರ ಅರ್ಜಿ ವಿಲೇವಾರಿ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲೆಯ ಮೂಲಕ ಕಡತ ವಿಲೇವಾರಿ ಅಭಿಯಾನ ಆರಂಭವಾಗಿದ್ದು, ರಾಜ್ಯದಗಲಕ್ಕೂ ಇದು ವಿಸ್ತರಿಸಲಿದೆ. ಈಗಾಗಲೇ 45 ಇಲಾಖೆಗಳಿಗೆ ಸಂಬಂಧಿಸಿದ 28,728 ಕಡತಗಳು, 2099 ದೂರು ಅರ್ಜಿಗಳು, 51,573 ಸಾವಿರ ಪಿಂಚಣಿ ಅರ್ಜಿಗಳು ಸೇರಿದಂತೆ ಸುಮಾರು 52,400 ಅರ್ಜಿಗಳು ಬಾಕಿ ಇದ್ದು, ಇದನ್ನು 10 ದಿನಗಳೊಳಗೆ ವಿಲೇವಾರಿ ಮಾಡಲು ಆದೇಶ ನೀಡಲಾಗಿದೆ ಎಂದರು.
ಅಧಿಕಾರಿಗಳು ಬಂದ ಅರ್ಜಿಯನ್ನು ಕಾಲಮಿತಿಯೊಳಗೆ ಮುಗಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ ಸಚಿವರು ಜನತೆಯ ಕೆಲಸ ನಿಧಾನಗತಿಯಲ್ಲಿ ಆಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವೇಗ ನೀಡುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇನ್ನು 10 ದಿನಗಳ ಕಾಲ ಅಧಿಕಾರಿಗಳು ಯಾವುದೇ ರಜೆ ಇಲ್ಲದೆ ಮತ್ತು ಎರಡು ಗಂಟೆಗಳ ಕಾಲ ಹೆಚ್ಚುವರಿಯಾಗಿ ಕರ್ತವ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದರು.
ಕಂದಾಯ ವಿಭಾಗಕ್ಕೆ ಸಂಬಂಧಿಸಿ ಜನತೆಯ ದೂರುಗಳಿಗೆ ಸ್ಪಂದಿಸಲು ಫೆ.28 ರಿಂದ ಪ್ರತಿ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಂದಾಯ ಮೇಳ ಆಯೋಜಿಸಲಾಗುವುದು ಎಂದು ಸುನೀಲ್ ಕುಮಾರ್ ಇದೇ ಸಂದರ್ಭ ತಿಳಿಸಿದರು.