ಹೊಸದಿಗಂತ ವರದಿ, ಕಲಬುರಗಿ:
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ 2021-22ನೇ ಸಾಲಿಗೆ ಜಿಲ್ಲೆಗೆ ಹೊಸದಾಗಿ 9000 ಮನೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ ಎಂದು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಅರುಣಕುಮಾರ ಮಾಶೆಟ್ಟಿ ಮಾಹಿತಿ ನೀಡಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಮಾತನಾಡಿ, ಕಳೆದ ಜ.4 ರಂದು ಆಳಂದ ಪಟ್ಟಣದಲಿ ್ಲ 1314 ಮನೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. 2018-19ನೇ ಸಾಲಿನಲ್ಲಿ ಮಂಜೂರಾದ 3300 ಮನೆಗಳ ಪೈಕಿ 2019 ಮನೆ ನಿರ್ಮಿಸಿ 888 ಹಂಚಿಕೆ ಮಾಡಲಾಗಿದೆ. ಉಳಿದ 1025 ಮನೆಗಳು ವಿವಿಧ ಪ್ರಗತಿಯಲ್ಲಿವೆ ಎಂದರು.
ಸಭೆಯಲ್ಲಿ ಕಲಬುರಗಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಚಿತ್ತಾಪೂರ ತಾಲೂಕಿನ ಅಶೋಕನ ಶಿಲಾಶಾಸನ ದೊರೆತಿರುವ ಸನ್ನತ್ತಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಮತ್ತು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಹಂಪಿ ಎ.ಎಸ್.ಐ. ಕಚೇರಿಯ ಉಪ ಇಂಜಿನೀಯರ್ ಕೆಂಪೆಗೌಡ ಅವರಿಗೆ ನಿರ್ದೇಶನ ನೀಡಿದರು.
ಹೊಸ ತಾಲೂಕಿನಲ್ಲಿ ಕಸ್ತೂರಬಾ ಗಾಂಧಿ ಶಾಲೆ ತೆರಯಲು ಪ್ರಸ್ತಾವನೆ ಸಲ್ಲಿಸಬೇಕು. ಚಿತ್ತಾಪೂರ ತಾಲೂಕಿನಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸಬೇಕು. ನಿರುದ್ಯೋಗ ಸಮಸ್ಯೆ ನೀಗಿಸಲು ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ ಗುರಿ ಹೆಚ್ಚಿಸಿ ಸ್ಥಳೀಯರಿಗೆ ಸಾಲ ನೀಡಬೇಕು. ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ವಸತಿ ನಿಲಯ ಸಿಗದ ಕಾರಣ ದಿನನಿತ್ಯ ನನಗೆ ಕರೆ ಮಾಡುತ್ತಿದಾರೆ. ಕೂಡಲೆ ವಸತಿ ನಿಲಯ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು
ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.