ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರಮಣಕಾರಿ ಪಾರ್ಶ್ವವನ್ನೇ ತೆರೆದಿದ್ದಾರೆ. ಕಳೆದ 15 ವರ್ಷಗಳ ಟಿಎಂಸಿ ಆಡಳಿತದ ವೈಫಲ್ಯಗಳನ್ನು ಪಟ್ಟಿ ಮಾಡಿರುವ ‘ಚಾರ್ಜ್ಶೀಟ್’ ಅನ್ನು ಕೋಲ್ಕತ್ತಾದಲ್ಲಿಂದು ಬಿಡುಗಡೆ ಮಾಡಿದರು.

“ಇದು ಕೇವಲ ಚಾರ್ಜ್ಶೀಟ್ ಅಲ್ಲ, ಬದಲಾಗಿ ಕಳೆದ ಒಂದೂವರೆ ದಶಕದಿಂದ ನೊಂದಿರುವ ಬಂಗಾಳದ ಜನರ ಆಕ್ರೋಶದ ಧ್ವನಿ” ಎಂದು ಶಾ ಬಣ್ಣಿಸಿದರು.
ಬಂಗಾಳವು ಕಳೆದ 15 ವರ್ಷಗಳಿಂದ ಭಯ, ಭ್ರಷ್ಟಾಚಾರ ಮತ್ತು ತಾರತಮ್ಯದ ರಾಜಕೀಯದ ಕೂಪವಾಗಿದೆ ಎಂದು ಟೀಕಿಸಿದರು.
ಈ ಚುನಾವಣೆ ಕೇವಲ ರಾಜ್ಯಕ್ಕೆ ಸೀಮಿತವಲ್ಲ. ಅಕ್ರಮ ವಲಸಿಗರನ್ನು ಹೊರಹಾಕುವ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ದೃಷ್ಟಿಯಿಂದಲೂ ಅತ್ಯಂತ ನಿರ್ಣಾಯಕವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಂಗಾಳದ ಜನತೆ ‘ಭಯ’ ಬೇಕೋ ಅಥವಾ ಸುಂದರ ಬಂಗಾಳದ ‘ಭರವಸೆ’ ಬೇಕೋ ಎಂಬುದನ್ನು ನಿರ್ಧರಿಸಬೇಕಿದೆ ಎಂದು ಕರೆ ನೀಡಿದರು.
“ಸರ್ಕಾರದ ಅಡಿಪಾಯ ಸಾರ್ವಜನಿಕ ಕಲ್ಯಾಣವಾಗಿರಬೇಕೇ ಹೊರತು ಸುಳ್ಳು, ಭಯ ಮತ್ತು ಹಿಂಸಾಚಾರವಲ್ಲ” ಎಂದು ಮಮತಾ ದೀದಿಗೆ ಶಾ ಚಾಟಿ ಬೀಸಿದರು.



