ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದರಲ್ಲಿ ದೇಶದಲ್ಲಿ ನಡೆಯುತ್ತಿರುವ ಸಿಜೆಪಿ (CJP) ಪ್ರತಿಭಟನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನಾಕಾರರ ವರ್ತನೆಯನ್ನು ‘ವಾಂತಿ ಬರಿಸುವಂತಿದೆ’ ಎಂದು ಕರೆದಿರುವ ಅವರು, “ಇವರನ್ನು ಹೆತ್ತು ಬೆಳೆಸುತ್ತಿರುವುದು ಯಾರು?” ಎಂದು ಪ್ರಶ್ನಿಸಿದ್ದಾರೆ.
ಎಕ್ಸ್ (X) ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುತ್ತಿರುವ ಮತ್ತು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಯುವ ಜನಾಂಗದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಕಂಗನಾ ರಣಾವತ್ ಪೋಸ್ಟ್ನಲ್ಲಿ ಏನಿದೆ?
“ಇವರನ್ನು ಹೆತ್ತು ಬೆಳೆಸುತ್ತಿರುವುದು ಯಾರು? ಈ ಯುವ ಪೀಳಿಗೆಯ ವರ್ತನೆ ಮತ್ತು ದೇಶದ ವಿರುದ್ಧದ ಇವರ ಆಕ್ರೋಶ ನಿಜಕ್ಕೂ ವಾಂತಿ ಬರಿಸುವಂತಿದೆ. ದೇಶವನ್ನು ನಾಶ ಮಾಡಲು ಹೊರಟಿರುವ ಇಂತಹ ಜನರಿಗೆ ದೇಶದ ಆಸ್ತಿಯ ಮೇಲೆ ಯಾವುದೇ ಗೌರವವಿಲ್ಲ,” ಎಂದು ಕಂಗನಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಪ್ರತಿಭಟನೆಗಳ ಹಿಂದೆ ಕೆಲವು ರಾಜಕೀಯ ಶಕ್ತಿಗಳ ಪ್ರಚೋದನೆ ಇದೆ ಎಂದು ಆರೋಪಿಸಿರುವ ಅವರು, ದೇಶದ ಯುವಕರು ತಪ್ಪು ಹಾದಿ ಹಿಡಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಣ್ಣ ಮಟ್ಟದಲ್ಲಿ ಇಂತಹ ಧೋರಣೆಗಳನ್ನು ಹತ್ತಿಕ್ಕಬೇಕು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಕಂಗನಾ ರಣಾವತ್ ಅವರ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಮತ್ತು ಪರ-ವಿರೋಧದ ಅಲೆಗೆ ಕಾರಣವಾಗಿದೆ.



