ಭಾರತೀಯ ಅಡುಗೆಯಲ್ಲಿ ಕರಿಬೇವಿನ ಸೊಪ್ಪಿಲ್ಲದ ಒಗ್ಗರಣೆಯನ್ನು ಊಹಿಸಿಕೊಳ್ಳುವುದು ಕಷ್ಟ. ಜೀರ್ಣಕ್ರಿಯೆ ಹೆಚ್ಚಿಸಲು, ಕೂದಲಿನ ಆರೋಗ್ಯಕ್ಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಕರಿಬೇವು ಸಹಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ, ನಾಣ್ಯಕ್ಕೆ ಎರಡು ಮುಖವಿರುವಂತೆ, ಕರಿಬೇವು ಎಲ್ಲರಿಗೂ ಒಳ್ಳೆಯದಲ್ಲ ಎಂಬ ಆಘಾತಕಾರಿ ಸತ್ಯವೊಂದು ಆಹಾರ ತಜ್ಞರಿಂದ ಹೊರಬಿದ್ದಿದೆ.
ಕೆಲವರಿಗೆ ಕರಿಬೇವಿನ ಎಲೆಗಳನ್ನು ತಿಂದಾಗ ಚರ್ಮದ ಮೇಲೆ ಕೆಂಪು ದದ್ದುಗಳು, ತುರಿಕೆ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಅಂತಹವರು ಕರಿಬೇವಿನಿಂದ ದೂರವಿರುವುದು ಒಳಿತು.
ಕರಿಬೇವಿನ ಎಲೆಗಳಲ್ಲಿ ಅಲ್ಕಲಾಯ್ಡ್ಗಳು ಅಧಿಕವಾಗಿರುವುದರಿಂದ, ಗರ್ಭಿಣಿಯರು ಅತಿಯಾಗಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.
ಇದರಲ್ಲಿ ಪೊಟ್ಯಾಸಿಯಮ್ ಅಂಶ ಇರುವುದರಿಂದ, ತೀವ್ರವಾದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರು ಇದರ ಬಳಕೆಯಲ್ಲಿ ಮಿತಿ ಕಾಯ್ದುಕೊಳ್ಳಬೇಕು.
ನೀವು ಸಕ್ಕರೆ ಕಾಯಿಲೆ ಅಥವಾ ರಕ್ತದೊತ್ತಡಕ್ಕೆ ಈಗಾಗಲೇ ಬಲವಾದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕರಿಬೇವಿನ ಅತಿಯಾದ ಸೇವನೆ ರಕ್ತದ ಸಕ್ಕರೆ ಮಟ್ಟವನ್ನು ಇದ್ದಕ್ಕಿದ್ದಂತೆ ಕುಸಿಯುವಂತೆ ಮಾಡಬಹುದು.
ಕರಿಬೇವಿನಲ್ಲಿ ಕೀಟನಾಶಕಗಳ ಅಂಶ ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಲೆಗಳನ್ನು ಚೆನ್ನಾಗಿ ತೊಳೆದು ಬಳಸಬೇಕು. ಯಾವುದೇ ಆರೋಗ್ಯಕಾರಿ ವಸ್ತುವಾದರೂ ‘ಅತಿಯಾದರೆ ಅಮೃತವೂ ವಿಷ’ ಎಂಬ ಮಾತಿನಂತೆ ಮಿತವಾಗಿ ಬಳಸುವುದು ಕ್ಷೇಮ.



