ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಏಪ್ರಿಲ್ 26ರಂದು ನಡೆಯಲಿರುವ 18ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಓಟದ ಹಿನ್ನೆಲೆ, ಸ್ಪರ್ಧೆ ನಡೆಯುವ ಪ್ರಮುಖ ಮಾರ್ಗವನ್ನು ತ್ವರಿತವಾಗಿ ದುರಸ್ತಿ ಮಾಡುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ವಿಡಿಯೋ ಸಂದೇಶದ ಮೂಲಕ ಅವರು ವಿನಂತಿ ಸಲ್ಲಿಸಿದ್ದಾರೆ.
ಕಳೆದ ವರ್ಷದ ಓಟದ ವೇಳೆ ನಗರದ ಹಲವು ರಸ್ತೆಗಳಲ್ಲಿ ಗುಂಡಿಗಳು ತುಂಬಿಕೊಂಡಿದ್ದರಿಂದ ಸ್ಪರ್ಧಿಗಳಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ದೇಶದ ವಿವಿಧ ಭಾಗಗಳಿಂದ ಸಾವಿರಾರು ಓಟಗಾರರು ಬೆಂಗಳೂರಿಗೆ ಆಗಮಿಸುವ ಕಾರಣ, ಈ ಸ್ಪರ್ಧೆ ನಗರದ ಗೌರವದ ಪ್ರತೀಕವಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಾರಿ ಅದೇ ಸಮಸ್ಯೆ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ನಗರದ ಎಲ್ಲಾ ರಸ್ತೆಗಳನ್ನು ಒಂದೇ ಬಾರಿ ದುರಸ್ತಿ ಮಾಡುವುದು ತಕ್ಷಣ ಸಾಧ್ಯವಾಗದ ವಿಚಾರ ಎನ್ನುವುದು ತಿಳಿದಿದ್ದರೂ, ಕನಿಷ್ಠ ಓಟ ನಡೆಯುವ 10 ಕಿ.ಮೀ ಮಾರ್ಗವನ್ನಾದರೂ ಮುಂದಿನ ಎರಡು ವಾರಗಳಲ್ಲಿ ಸರಿಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿಐಪಿ ಸಂಚಾರಕ್ಕಾಗಿ ರಸ್ತೆಗಳನ್ನು ತುರ್ತುವಾಗಿ ದುರಸ್ತಿ ಮಾಡುವ ವ್ಯವಸ್ಥೆ ಇರುವುದಾದರೆ, ನಗರದ ಪ್ರತಿಷ್ಠಿತ ಕ್ರೀಡಾ ಕಾರ್ಯಕ್ರಮಕ್ಕಾಗಿ ಸಹ ಇದೇ ವೇಗದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿದೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.



