ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಅಲ್ಮೋರಾದಲ್ಲಿ ಸ್ಮಶಾನದಲ್ಲಿಯೇ ಜೋಡಿಯೊಂದು ಹಸೆಮಣೆ ಏರಿದೆ.
ಮದುವೆಯಾಗಿ ವರ್ಷ ಕಳೆಯುವ ಮುನ್ನ ಸ್ಮಶಾನಕ್ಕೆ ಹೊಸ ಜೋಡಿಗೆ ಹೋಗೋಕೆ ಅವಕಾಶ ನೀಡೋದಿಲ್ಲ. ಆದರೆ ಈ ಜೋಡಿ ಉರಿಯುವ ಚಿತೆಗಳ ಸದ್ದಿನ ಮಧ್ಯದಲ್ಲಿ ಹೊಸ ಜೀವನವನ್ನು ಆರಂಭಿಸಿದ್ದಾರೆ.
ರಾಮಗಂಗಾ ಹಾಗೂ ಬದನ್ ಗಢ ನದಿಗಳ ಪವಿತ್ರ ಸಂಗಮ ಸ್ಥಳದಲ್ಲಿ ಕಾಲ ಕಾಲಗಳಿಂದಲೂ ಗ್ರಾಮಸ್ಥರು ಈ ಜಾಗವನ್ನು ರುದ್ರಭೂಮಿಯನ್ನಾಗಿ ಬಳಸಿದ್ದಾರೆ. ಕಳೆದ ಭಾನುವಾರ ಇದೇ ಭೂಮಿಯಲ್ಲಿ ಮೂರ್ನಾಲ್ಕು ಚಿತೆಗಳು ಉರಿಯುತ್ತಾ ಇದ್ರೆ ಇತ್ತ ಮಂತ್ರಘೋಷಗಳ ಮಧ್ಯೆ ಮದುವೆಯೊಂದು ನೆರವೇರಿದೆ.
ಈ ಸ್ಥಳ ನೋಡೋದಕ್ಕೆ ಅದ್ಭುತವಾಗಿದ್ದು, ಯಾವುದೇ ಡೆಸ್ಟಿನೇಷನ್ ಮದುವೆಗೂ ಕಮ್ಮಿಯಿಲ್ಲ. ಮೊದಲು ಮದುವೆಗೆ ಬಂದ ಜನರಿಗೆ ಚಿತೆ, ಜನರ ಅಳು ಎಲ್ಲವನ್ನೂ ನೋಡಿ ಇಲ್ಲಿ ಮದುವೆ ಮಾಡಿಕೊಳ್ಳಬಾರದು ಎನಿಸಿದ್ದರೂ ಸುತ್ತಮುತ್ತಲಿನ ಸೌಂದರ್ಯಕ್ಕೆ ಜನ ಮನಸೋತು ಸುಮ್ಮನಾಗಿದ್ದಾರೆ.
ಬಂದ ಜನರೆಲ್ಲ ಇದರ ಫೋಟೊ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ಆದರೆ ಇದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇಷ್ಟವಾಗಿಲ್ಲ. ಚಿತಾಗಾರಗಳಲ್ಲಿ ಶುಭ ಕಾರ್ಯ ಮಾಡುವಂತಿಲ್ಲ. ನೆಮ್ಮದಿಯಾಗಿ ನಮ್ಮವರನ್ನು ಕಳಿಸಿಕೊಡಲು ಮದುವೆ ಅಡ್ಡಿಯಾಗಿದೆ. ಈ ಜಾಗ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವಂಥದ್ದು, ಇಲ್ಲಿ ಗದ್ದಲದ ಕಾರ್ಯಕ್ರಮ ಮಾಡಿದ್ದು ಏಕೆ ಎಂದು ಗರಂ ಆಗಿದ್ದಾರೆ.



