ಹೊಸ ದಿಗಂತ ವರದಿ,ಮಂಗಳೂರು:
‘ಈಗ ನಾನು ಸ್ಪೀಕರ್ ಆಗಿ ಇದ್ದೇನೆ. ಮುಂದೆ ಏನಾಗುತ್ತದೆ ಎಂಬ ಮಾಹಿತಿ ನನಗೂ ಇಲ್ಲ. ಸಮಯ ಅದನ್ನು ನಿರ್ಧರಿಸುತ್ತದೆ ಎಂದು ಸ್ಪೀಕರ್ ಯು. ಟಿ. ಖಾದರ್ ಹೇಳಿದ್ದಾರೆ.
ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗ ನಾನು ಯಾವುದೇ ರಾಜಕೀಯ ಮಾತನಾಡಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಸಮಯ ಬಂದಾಗ ಗೊತ್ತಾಗುತ್ತದೆ. ಸರ್ಕಾರ ಯಾವಾಗ ಅವೇಶನ ನಡೆಸಲು ತೀರ್ಮಾನಿಸುತ್ತದೆ, ಆಗ ಸುಸೂತ್ರವಾಗಿ ಸದನ ನಡೆಸುತ್ತೇನೆ. ಯಾರು ಯಾರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಆಡಳಿತ ಪಕ್ಷದ ಪ್ರಮುಖರು ತೀರ್ಮಾನ ಮಾಡುತ್ತಾರೆ ಎಂದರು.
ಎಲ್ಲಾ ವಿಚಾರಗಳು ಪಕ್ಷಕ್ಕೆ ಬಿಟ್ಟಿದ್ದು
ನಾನು ಉಪ ಮುಖ್ಯಮಂತ್ರಿಯಾಗಬೇಕೆಂಬ ಪೋಸ್ಟ್ ಅನ್ನು ಯಾರು ಸಹ ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ. ಈ ಎಲ್ಲಾ ವಿಚಾರಗಳು ಪಕ್ಷಕ್ಕೆ, ಮುಖಂಡರಿಗೆ ಬಿಟ್ಟಿದ್ದು. ಈ ಎಲ್ಲಾ ವಿಚಾರಗಳನ್ನು ನಾನು ಹೇಳಿದರೆ ಗುಟ್ಟು ಉಳಿಯುತ್ತಾ? ಏನು ಬರುತ್ತದೆ ಅಂತಾ ನೋಡೋಣ. ಇವತ್ತು ಸಂತೋಷದಿಂದ ಹಬ್ಬವನ್ನು ಆಚರಿಸೋಣ. ನನಗೆ ನಿಮ್ಮ ಮೂಲಕವೇ ಸಿಹಿ ಸುದ್ದಿ ಬರುವುದು. ಬೆಂಗಳೂರಿಗೆ ಹೋಗುವ ಬಗ್ಗೆ ತೀರ್ಮಾನಿಸಿಲ್ಲ. ಇವತ್ತು ಬಕ್ರಿದ್ ಹಬ್ಬ ಇರುವುದರಿಂದ ಆಚರಿಸುವುದು ಇವತ್ತಿನ ನನ್ನ ಕೆಲಸ ಎಂದರು.



