ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಅಕ್ರಮ ನುಸುಳುಕೋರರ ವಿರುದ್ಧ ಕಾರ್ಯಾಚರಣೆ ಶುರು ಮಾಡಿದ ಸಿಎಂ ಸುವೇಂದು ಅಧಿಕಾರಿ ನೇತೃತ್ವದ ರಾಜ್ಯ ಸರ್ಕಾರವು, ಸುಮಾರು 600 ಹೆಕ್ಟೇರ್ ಭೂಮಿಯನ್ನು ಗಡಿ ಭದ್ರತಾ ಪಡೆಗೆ (ಬಿಎಸ್ಎಫ್) ಹಸ್ತಾಂತರಿಸಿದ್ದು, ಈ ಮೂಲಕ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಗುಜರಾತ್ನ ಗಾಂಧಿನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ಚಿಕನ್ ನೆಕ್ ಕಾರಿಡಾರ್ ಮೇಲೆ ವಿಶೇಷ ಗಮನ ಹರಿಸಿದ್ದು, ಅಲ್ಲಿ ಕಣ್ಗಾವಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ಭೂಮಿಯನ್ನು ಬಿಎಸ್ಎಫ್ಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಬಾಂಗ್ಲಾದೇಶದತ್ತ ವಾಪಾಸ್
ಕೇಂದ್ರ ಮತ್ತು ರಾಜ್ಯ ಸರ್ಕಾರವು ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಕ್ರಮ ನುಸುಳುಕೋರರ ಮೇಲೆ ಈಗಾಗಲೇ ಒತ್ತಡ ಸೃಷ್ಟಿಸಿದ್ದು, ಇದರ ಭಾಗವಾಗಿ ಇಂದು ಅನೇಕ ನುಸುಳುಕೋರರು ತಾವಾಗಿಯೇ ಬಾಂಗ್ಲಾದೇಶಕ್ಕೆ ಹಿಂತಿರುಗುತ್ತಿದ್ದಾರೆ ಎಂದು ತಿಳಿಸಿದರು.
ಪ್ರತಿಯೊಬ್ಬ ಅಕ್ರಮ ವಲಸಿಗರಿಗೆ ಗೇಟ್ ಪಾಸ್
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಾಕಿ ಉಳಿದಿರುವ ಬೇಲಿ ನಿರ್ಮಾಣ ಕಾರ್ಯವು ಶೀಘ್ರದಲ್ಲೇ ಪುನಾರಂಭಗೊಳ್ಳಲಿದ್ದು, ಈ ಮೂಲಕ ನುಸುಳುವಿಕೆಯ ಮಾರ್ಗಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಮತ್ತು ದೇಶದಲ್ಲಿರುವ ಪ್ರತಿಯೊಬ್ಬ ಅಕ್ರಮ ವಲಸಿಗನನ್ನು ಗುರುತಿಸಿ, ವಾಪಸ್ ಕಳುಹಿಸಲಾಗುವುದು ಎಂದು ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ.



