ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಎಂಬಂತೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಸಿಎಂ ಪಟ್ಟಕ್ಕೆ ಕಣ್ಣಿಟ್ಟಿದ್ದಾರೆ.
ಇದರ ನಡುವೆ ತುಮಕೂರಿನ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿಬಸವೇಶ್ವರ ಸ್ವಾಮೀಜಿ (ಅಜ್ಜಯ್ಯ) ಭವಿಷ್ಯ ನುಡಿದಿದ್ದು, ಶ್ರೀಮಠದ ಆಶೀರ್ವಾದ ಡಿಕೆ ಶಿವಕುಮಾರ ಅವರಿಗೆ ಇರುತ್ತದೆ. ಅವರು ರೈತರ ಪರ ,ಬಡವರ ಪರ ಇರುವ ನಾಯಕನಾಗಿ ಹೊರಹೊಮ್ಮುತ್ತಾರೆ ಎಂದು ತಿಳಿಸಿದ್ದಾರೆ.
ಎಚ್ಚರಿಕೆ ನೀಡಿದ ಅಜ್ಜಯ್ಯ
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಗೆ ಕರೆಸಿದ್ದ ಸಂದರ್ಭ ಕೂಡ ಶಿವಯೋಗೀಶ್ವರ ಸ್ವಾಮೀಜಿಗಳು, ನೂರಕ್ಕೆ ನೂರು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದು ಪಕ್ಕಾ ಎಂದು ಹೇಳಿದ್ದರು. ಇದೀಗ ಮತ್ತೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ಆಡುವ ಒಂದು ಸಣ್ಣ ಮಾತು ಕೂಡ ಕೆಲಸವನ್ನು ಕೆಡಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಕೆಶಿಗೆ ಶ್ರೀಮಠದ ಆಶೀರ್ವಾದ
ಡಿಕೆಶಿ ಅವರಿಗೆ ಶ್ರೀಮಠದ ಆಶೀರ್ವಾದ ಇರುತ್ತದೆ. ರಾಜ ಪ್ರತ್ಯಕ್ಷ ದೇವತಾ. ರಾಜ್ಯವನ್ನು ಆಳುವಂತ ದೊರೆ ನಾಯಕ. ಇಂದು ಶ್ರೀ ಮಠದ ಧರ್ಮದ ಧ್ವಜವನ್ನು ಕೊಟ್ಟು ಆರ್ಶಿವಾದ ಮಾಡುವ ಕಾಲ ಹತ್ತಿರ ಬಂದಿದೆ. ಎಲ್ಲರ ಪ್ರೀತಿ ವಿಶ್ವಾಸದಿಂದ ಅವರ ಬಾಳು ಬಂಗಾರವಾಗಲೆಂದು ಆರ್ಶಿವಾದ ಮಾಡುತ್ತೇನೆ. ಶಾಸ್ತ್ರದ ಪ್ರಕಾರ ಸಕಲ ದೋಷವನ್ನು ನೋಡಿಕೊಂಡು ಡಿ.ಕೆ. ಶಿವಕುಮಾರ್ ನಡೆದುಕೊಳ್ಳಬೇಕು ಎಂದು ಎಂದು ಹೇಳಿದ್ದಾರೆ.



