July 20, 2026
Monday, July 20, 2026
spot_img

ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ: ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹವಾಮಾನ ಇಲಾಖೆ ನೀಡಿರುವ ಭೀಕರ ವಾತಾವರಣದ ಎಚ್ಚರಿಕೆಯಿಂದಾಗಿ, ಪ್ರಸ್ತುತ ವರ್ಷದ ಪವಿತ್ರ ಅಮರನಾಥ ಯಾತ್ರೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜುಲೈ 19 ರಿಂದ ಜಾರಿಗೆ ಬರುವಂತೆ ಪಹಲ್ಗಾಮ್ ಮತ್ತು ಬಾಲ್ಟಾಲ್ ಎರಡೂ ಮಾರ್ಗಗಳ ಸಂಚಾರವನ್ನು ಸ್ಥಗಿತಗೊಳಿಸಲು ಜಮ್ಮು-ಕಾಶ್ಮೀರ ಸರ್ಕಾರ ನಿರ್ಧರಿಸಿದೆ.

ಬೇಸ್ ಕ್ಯಾಂಪ್‌ಗಳಲ್ಲೇ ಉಳಿಯಲು ಭಕ್ತರಿಗೆ ಸೂಚನೆ

ಅಧಿಕೃತ ಮೂಲಗಳ ಪ್ರಕಾರ, ಜುಲೈ 19 ರ ಬಳಿಕ ನುನ್ವಾನ್-ಚಂದನ್ವರಿ ಹಾಗೂ ಬಾಲ್ಟಾಲ್ ಬೇಸ್ ಕ್ಯಾಂಪ್‌ಗಳಿಂದ ಭಕ್ತರು ಪವಿತ್ರ ಗುಹೆಯತ್ತ ಸಾಗಲು ಅನುಮತಿಯನ್ನು ನಿರಾಕರಿಸಲಾಗಿದೆ. ಈಗಾಗಲೇ ಕ್ಯಾಂಪ್‌ಗಳನ್ನು ತಲುಪಿರುವ ಯಾತ್ರಿಕರು ಆಯಾ ಸ್ಥಳಗಳಲ್ಲೇ ಸುರಕ್ಷಿತವಾಗಿ ತಂಗುವಂತೆ ಮತ್ತು ಸ್ಥಳೀಯ ಪ್ರಕಟಣೆಗಳನ್ನು ಗಮನಿಸುವಂತೆ ವಿನಂತಿಸಲಾಗಿದೆ. ವಾತಾವರಣವು ತಿಳಿಯಾದ ಬಳಿಕ ಮಾರ್ಗಗಳ ಸುರಕ್ಷತೆಯನ್ನು ಪರಿಶೀಲಿಸಿ, ಯಾತ್ರೆ ಪುನರಾರಂಭದ ಕುರಿತು ಸಮಿತಿಯು ತೀರ್ಮಾನಿಸಲಿದೆ.

ಸುರಕ್ಷತೆಗೆ ಮೊದಲ ಆದ್ಯತೆ: ಆತಂಕ ಬೇಡ

ಕಣಿವೆ ರಾಜ್ಯದ ಪರ್ವತ ಪ್ರದೇಶಗಳಲ್ಲಿ ಮಳೆಯಿಂದಾಗಿ ಭೂಕುಸಿತ ಮತ್ತು ಕಲ್ಲುಗಳು ಉರುಳುವ ಭೀತಿ ಹೆಚ್ಚಾಗಿದೆ. ಹೀಗಾಗಿ ಕಡಿದಾದ ರಸ್ತೆಗಳಲ್ಲಿ ಸಾಗುವ ಭಕ್ತರ ಜೀವಕ್ಕೆ ಎದುರಾಗಬಹುದಾದ ಅಪಾಯವನ್ನು ತಪ್ಪಿಸಲು ಈ ಕ್ರಮ ಅನಿವಾರ್ಯವಾಗಿದೆ. ಬೇಸ್ ಕ್ಯಾಂಪ್‌ಗಳಲ್ಲಿರುವ ಭಕ್ತರು ಭಯಪಡುವ ಅಗತ್ಯವಿಲ್ಲ; ಆಡಳಿತ ಮಂಡಳಿಯು ಹವಾಮಾನದ ಮೇಲೆ ನಿರಂತರ ನಿಗಾ ಇಟ್ಟಿದ್ದು, ಪರಿಸ್ಥಿತಿ ಸುಧಾರಿಸಿದ ತಕ್ಷಣ ಅಧಿಕೃತ ದಿನಾಂಕವನ್ನು ಪ್ರಕಟಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !