ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೋಟೆಕೋಶಿ-ತ್ರಿಶೂಲಿ ನದಿ ಪಾತ್ರದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬೆನ್ನಲ್ಲೇ ಈಗ ಮತ್ತೊಂದು ಆತಂಕ ಎದುರಾಗಿದೆ.
ಹೌದು! ನೇಪಾಳ ಹಾಗೂ ಚೀನಾ ಗಡಿಯುದ್ದಕ್ಕೂ ರೂಪುಗೊಂಡಿರುವ ಸರೋವರವೊಂದು ಒಡೆದುಹೋಗುವ ಹಂತದಲ್ಲಿದ್ದು, ಮೊದಲೇ ಭೀಕರ ಪ್ರವಾಹದಿಂದ ತತ್ತರಿಸಿರುವ ಪ್ರದೇಶದಲ್ಲಿ ಈಗ ಮತ್ತಷ್ಟು ಪ್ರವಾಹ ಉಂಟಾಗುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದಿರುವಂತೆ ಜನರಿಗೆ ಸೂಚನೆ ನೀಡಿದ್ದಾರೆ.
ಚೀನಾ ಹೇಳಿದ್ದೇನು?
ಚೀನಾದ ಜಲಸಂಪನ್ಮೂಲ ಸಚಿವಾಲಯದ ಪ್ರಕಾರ ನೇಪಾಳ-ಟಿಬೆಟ್ ಗಡಿಯ ಬಳಿ ಲೆಂಡೆ ನದಿಯಲ್ಲಿ ರೂಪುಗೊಂಡ ತಾತ್ಕಾಲಿಕ ಸರೋವರದಲ್ಲಿ ಈಗಾಗಲೇ ಸುಮಾರು 20 ಲಕ್ಷ ಘನ ಮೀಟರ್ ನೀರು ಸಂಗ್ರಹವಾಗಿದ್ದು, ಮುಂದಿನದಿನಗಳಲ್ಲಿ ಮತ್ತಷ್ಟು ನೀರು ಸೇರಿಕೊಳ್ಳುವ ಸಾಧ್ಯತೆ ಇದ್ದು ಇದರಿಂದ ನೈಸರ್ಗಿಕ ತಡೆಗೋಡೆ ಒಡೆದು ಹೋಗುವ ಅಪಾಯವಿದೆ ಎಂದು ಚೀನಾ ಎಚ್ಚರಿಸಿದೆ.
ಇದನ್ನೂ ಓದಿ:
ಮುಂದಿನ ವಾರವೂ ಭಾರೀ ಮಳೆ
ಮುಂದಿನ ವಾರ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಅಪಾಯವಿದೆ. ಈ ಎಚ್ಚರಿಕೆಯ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕೆಲ ಸಿಬ್ಬಂದಿಯನ್ನೂ ಸುರಕ್ಷಿತ ಸ್ಥಳಗಳಿಗೆ ಸ್ತಾಳಾಂತರಿಸಲಾಗಿದೆ.
ಈಗಾಗಲೇ ಭೀಕರ ಪ್ರವಾಹದಿಂದ ನೂರಾರು ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಹೊಸದಾಗಿ ರೂಪುಗೊಂಡಿರುವ ಸರೋವರ ಮತ್ತೊಂದು ಪ್ರವಾಹಕ್ಕೆ ಕಾರಣವಾಗಬಹುದೇ ಎಂಬ ಆತಂಕ ಎರಡೂ ದೇಶಗಳಲ್ಲೂ ಹೆಚ್ಚಾಗಿದೆ.



