ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಡಿಸಲೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಕುಟುಂಬ ಪೂರ್ತಿ ಸಜೀವ ದಹನವಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರ ದೇಹತ್ನಲ್ಲಿ ನಡೆದಿದೆ. ದಂಪತಿ ಮತ್ತು ಮೂವರು ಮಕ್ಕಳು ಸೇರಿದಂತೆ ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಂಡಾಗ ಕುಟುಂಬಸ್ಥರು ಗುಡಿಸಲಿನಲ್ಲಿ ಮಲಗಿದ್ದರೆಂದು ತಿಳಿದುಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸಿದರಾದರೂ ಅಷ್ಟೊತ್ತಿಗಾಗಲೇ ಮನೆಯವರೆಲ್ಲ ಬೂದಿಯಾದರು. ಕಾನ್ಪುರ ಎಸ್ಪಿ ತಡರಾತ್ರಿ ಘಟನಾ ಸ್ಥಳಕ್ಕೆ ಧಾವಿಸಿ, ತನಿಖೆ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಶನಿವಾರ ತಡರಾತ್ರಿ ಬೆಂಕಿಗೆ ಆಹುತಿಯಾಗಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ದಂಪತಿ ಸತೀಶ್ (30) ಮತ್ತು ಕಾಜಲ್ (26) ಮೂವರು ಮಕ್ಕಳಾದ ಸನ್ನಿ (6), ಸಂದೀಪ್ (5), ಗುಡಿಯಾ (3) ಗುಡಿಸಲಿನಲ್ಲಿಯೇ ಸುಟ್ಟು ಕರಕಲಾಗಿದ್ದಾರೆ ಎಂದು ಮಾಹಿತಿ ನೀಡಿದರು. ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಹೇಳಲಾಗಿದೆ.
ಅನಾರೋಗ್ಯದಿಂದ ಸತೀಶ್ ಅವರ ತಂದೆ-ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಸ್ಪಿ ಆಸ್ಪತ್ರೆಗೆ ತೆರಳಿ ವಿಚಾರ ಮುಟ್ಟಿಸಿದರು. ವಿಷಯ ತಿಳಿಯುತ್ತದ್ದಂತೆ ವೃದ್ಧ ತಂದೆ ತಾಯಿಗೆ ಬರಸಿಡಿಲು ಬಡಿದಂತಾಗಿ, ರೋದನ ಮುಗಿಲುಮುಟ್ಟಿತು.