ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮ ಮಂದಿರ (Ram Mandir) ಉದ್ಘಾಟನೆಗೆ ಪಾಲ್ಗೊಂಡಿದ್ದ ಭಕ್ತರೊಬ್ಬರಿಗೆ (Ram Devotee) ಹೃದಯಾಘಾತವಾಯಿತು(Heart attack). ಕೂಡಲೇ ರಕ್ಷಣೆಗೆ ಧಾವಿಸಿದ ಭಾರತೀಯ ವಾಯು ಪಡೆಯ ಮೊಬೈಲ್ ಹಾಸ್ಪಿಟಲ್(IAF Mobile Hospital), ಅವರನ್ನು ಪ್ರಾಣಾಪಾಯದಿಂದ ರಕ್ಷಿಸಲು ಯಶಸ್ವಿಯಾಯಿತು.
65 ವರ್ಷದ ರಾಮಕೃಷ್ಣ ಶ್ರೀವಾಸ್ತವ್ ಅವರು ದೇವಾಲಯದ ಸಂಕೀರ್ಣದೊಳಗೆ ಕುಸಿದು ಬಿದ್ದರು. ಕೂಡಲೇ ವಿಂಗ್ ಕಮಾಂಡರ್ ಮನೀಶ್ ಗುಪ್ತಾ ನೇತೃತ್ವದ ಭೀಮ್ ಕ್ಯೂಬ್ ತಂಡವು ಘಟನೆಯ ಒಂದು ನಿಮಿಷದಲ್ಲಿ ಅವರನ್ನು ಸ್ಥಳಾಂತರಿಸಿತು ಮತ್ತು ಸ್ಥಳದಲ್ಲೇ ಚಿಕಿತ್ಸೆ ನೀಡಿತು. ನಿರ್ಣಾಯಕ ಗೋಲ್ಡನ್ ಅವರ್ ವೇಳೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲು ಸಾಧ್ಯವಾಯಿತು. ಇದರಿಂದಾಗಿ ಅವರು ಪ್ರಾಣಾಪಾಯದಿಂದ ಪಾರಾದರು.
ಹೃದಯಾಘಾತವಾದ ವ್ಯಕ್ತಿಯ ಆರಂಭಿಕ ವೈದ್ಯಕೀಯ ಮೌಲ್ಯ ಮಾಪನದಲ್ಲಿ, ಅವರ ರಕ್ತದೊತ್ತಡವು 210/170 mm Hg ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿತ್ತು. ಅವರಿದ್ಧ ಸ್ಥಳದಲ್ಲಿ ತ್ವರಿತವಾಗಿ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಯಿತು. ಅವರ ಆರೋಗ್ಯವು ಸ್ಥಿರ ಮಟ್ಟಕ್ಕೆ ಬಂದ ನಂತರ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.