ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲಬಾಧೆಯಿಂದ ಬೇಸತ್ತ ಒಂದೇ ಕುಟುಂಬದ ಏಳು ಮಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಾಮನಗರದ ದೊಡ್ಡ ಮಣ್ಣುಗುಡ್ಡೆ ಗ್ರಾಮದ ಕುಟುಂಬ ವಿಷ ಸೇವಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದ ಆರು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ರಾಜು, ಪತ್ನಿ ಮಂಗಳಮ್ಮ, ಮಂಗಳಮ್ಮನ ತಾಯಿ ಸೊಲ್ಲಾಪುರದಮ್ಮ, ರಾಜು ಮಕ್ಕಳಾದ ಆಕಾಶ್, ಕೃಷ್ಣ ಹಾಗೂ ಮಂಗಳಮ್ಮನ ತಂಗಿ ಸವಿತಾ, ಅವರ ಮಗಳು ದರ್ಶಿನಿ ಊಟದಲ್ಲಿ ವಿಷ ಸೇವಿಸಿದ್ದರು.
ಮಂಗಳಮ್ಮ ಮೃತಪಟ್ಟಿದ್ದು, ಉಳಿದವರ ಸ್ಥಿತಿ ಚಿಂತಾಜನಕವಾಗಿದೆ. ಬೆಂಗಳೂರಿನಲ್ಲಿ ಸಾಲದ ಹೊರೆ ಹೆಚ್ಚಾಗಿ ರಾಮನಗರಕ್ಕೆ ಬಂದಿದ್ದರು. ಆದರೆ ಅಲ್ಲಿಗೂ ಸಾಲಗಾರರು ಎಂಟ್ರಿ ಕೊಟ್ಟಿದ್ದರು. ಒಟ್ಟಾರೆ ೧೧ ಲಕ್ಷ ರೂಪಾಯಿ ಬಡ್ಡಿ ಸಾಲ ಮಾಡಿದ್ದರು ಎನ್ನಲಾಗಿದೆ.
ಇಡೀ ಕುಟುಂಬ ಒಟ್ಟಿಗೇ ಕುಳಿತು ಸಾಯುವ ನಿರ್ಧಾರ ಮಾಡಿದ್ದರು. ಊಟ ಮಾಡಲು ಸಮಾಧಿ ಬಳಿ ತೆರಳಿದ್ದು, ಸೊಲ್ಲಾಪುರದಮ್ಮನ ಗಂಡನ ಸಮಾಧಿ ಬಳಿ ಕುಳಿತು ಊಟ ಸೇವಿಸಿದ್ದರು. ಬಳಿಕ ಹಳ್ಳಿಗೆ ಬಂದು ನೆರೆಮನೆಯವರಿಗೆ ವಿಷ ಕುಡಿದಿದ್ದೇವೆ ಎಂದು ಹೇಳಿದ್ದರು. ಅವರು ತಕ್ಷಣ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿದ್ದರು.