ʼಕೆಸಿಆರ್‌ʼಗೆಂದೇ ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತಿರುವ ಅಭಿಮಾನಿ: ಪ್ರಧಾನಿಯಾಗಿ ನೋಡುವಾಸೆಯಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನಿಗಳಾದವರು ಏನೆಲ್ಲಾ ಮಾಡಬಹುದು ಎಂದು ಕೇಳಿದರೆ ತೆಲಂಗಾಣದ ಈ ವ್ಯಕ್ತಿ ದೇವಸ್ಥಾನ ಕಟ್ಟಿ ಪೂಜಿಸಲೂಬಹುದು ಎಂದು ಉತ್ತರಿಸುತ್ತಾನೆ. ಹೌದು, ಈತ ತನ್ನ ನೆಚ್ಚಿನ ನಾಯಕನಿಗೆಂದೇ ದೇವಸ್ಥಾನವೊಂದನ್ನು ಕಟ್ಟಿ ನಿತ್ಯವೂ ಪೂಜಿಸುತ್ತಿದ್ದಾನೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರ ಕಟ್ಟಾ ಅಭಿಮಾನಿಯಾದ ಈತ ಅವರ ಮೂರ್ತಿಯನ್ನು ಪ್ರತಿಷ್ಟಾಪಿಸಿ ಅವರಿಗೆ ನಿತ್ಯವೂ ಪೂಜಿಸುತ್ತಿದ್ದಾನೆ.

ಇತ್ತೀಚೆಗಷ್ಟೇ ಭಾರತ್‌ ರಾಷ್ಟ್ರ ಸಮಿತಿ ಎಂಬುದಾಗಿ ರಾಷ್ಟ್ರೀಯ ಪಕ್ಷವನ್ನು ಘೋಷಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌ ಅವರು ಪ್ರಧಾನಿಯಾಗಬೇಕೆಂದು ಈತ ನಿತ್ಯವೂ ಆಶಿಸುತ್ತಾನೆ. ಪೋಲೀಸ್‌ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಿಡಮನೂರ್ ಗ್ರಾಮದ ಗೋಗುಲಾ ಶ್ರೀನಿವಾಸ್ ಎಂಬಾತನೇ ಈ ಮಹಾನುಭಾವ.

ಮೊದಲಿನಿಂದಲೂ ಕೆಸಿಆರ್ ತಮ್ಮ ನೆಚ್ಚಿನವರು ಎಂದು ಆತ ಹೇಳಿಕೊಂಡಿದ್ದು ಪ್ರತ್ಯೇಕ ತೆಲಂಗಾಣಕ್ಕಾಗಿ ಕೆಸಿಆರ್‌ ರವರ ಚಳವಳಿಯಿಂದ ಅವರೆಡೆಗೆ ಆಕರ್ಷಿತನಾಗಿರುವುದಾಗಿ ಹೇಳಿಕೊಂಡಿದ್ದಾನೆ. ಮೇಲಾಗಿ ಕೆಲಸದಿಂದ ರಜೆ ಪಡೆದು ಕೆಸಿಆರ್ ನೇತೃತ್ವದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಚಳವಳಿಯಲ್ಲಿ ಭಾಗವಹಿಸಿದ್ದ.

ತನ್ನ ನಾಯಕನ ಮೇಲಿರುವ ಪ್ರೀತಿಯನ್ನು ತೋರಿಸಲು ಶ್ರೀನಿವಾಸ್ 20 ಲಕ್ಷ ರೂಪಾಯಿ ಖರ್ಚು ಮಾಡಿ ದೇವಸ್ಥಾನವನ್ನು ನಿರ್ಮಿಸಿ ಅದರಲ್ಲಿ ಕೆಸಿಆರ್ ಮೂರ್ತಿಯನ್ನೂ ಪ್ರತಿಷ್ಠಾಪಿಸಿ ನಿತ್ಯ ಪೂಜಿಸುತ್ತಿದ್ದಾನೆ.

ಕೆಸಿಆರ್ ಮೇಲಿನ ಅಭಿಮಾನದಿಂದ ಈ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. ಕೆಸಿಆರ್ ಭಾರತದ ಪ್ರಧಾನಿಯಾಗುವುದನ್ನು ನೋಡಬೇಕೆಂಬುದು ನನ್ನ ಆಶಯ ಎಂದು ಶ್ರೀನಿವಾಸ್‌ ಹೇಳಿಕೊಂಡಿರುವುದಾಗಿ ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!