ಹೊಸದಿಗಂತ ವರದಿ ಕಾರವಾರ:
ಸಿಡಿಲು ಬಡಿದು ಮೀನುಗಾರ ಮೃತಪಟ್ಟ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಕಡಲ ತೀರದಲ್ಲಿ ಸಂಭವಿಸಿದೆ.
ಅಪ್ಸರಕೊಂಡದ ಖಾರ್ವಿಕೇರಿಯ ನಿವಾಸಿ ವಿನಾಯಕ ಗಣೇಶ ಖಾರ್ವಿ(35) ಮೃತ ದುರ್ದೈವಿಯಾಗಿದ್ದು ಸಾಂಪ್ರದಾಯಿಕ ಮೀನುಗಾರಿಕೆ ಮುಗಿಸಿಕೊಂಡು ದಡಕ್ಕೆ ಬಂದು ತಲುಪಿ ದೋಣಿ ಎಳೆಯುತ್ತಿರುವ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು ಸಿಡಿಲಿನ ಆಘಾತದಿಂದ ಗಂಭೀರವಾಗಿ ಗಾಯಗೊಂಡ ಮೀನುಗಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ:
ಸಿಡಿಲಿನ ಆಘಾತದಿಂದ ಕುಸಿದು ಬಿದ್ದವನನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮೃತ ಪಟ್ಟಿರುವುದಾಗಿ ವೈದ್ಯರು ದೃಡಪಡಿಸಿದರು. ಇದೇ ಕಡಲತೀರದಲ್ಲಿದ್ದ ಕೆಲವು ಪ್ರವಾಸಿಗರೂ ಸಿಡಿಲಿನ ಆಘಾತಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು ಹೊನ್ನಾವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಕಿ ಪಿ.ಎಸ್.ಐ ಕುಮಾರ ಕಾಂಬ್ಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



