ದಿಗಂತ ವರದಿ ಕುಂದಾಪುರ:
ಪರಿಚಯದ ಮುಸ್ಲಿಂ ವಿದ್ಯಾರ್ಥಿನಿಯೋರ್ವಳ ಜೊತೆ ಮಾತನಾಡಿದ್ದಕ್ಕೆ ಹಿಂದೂ ವಿದ್ಯಾರ್ಥಿಗೆ ನಾಲ್ವರು ಯುವಕರು ಬಸ್ಸಿನಲ್ಲೇ ಹಿಗ್ಗಾಮುಗ್ಗ ಥಳಿಸಿ ಜೀವ ಬೆದರಿಕೆ ಹಾಕಿದ ಘಟನೆ ಗುರುವಾರ ಹಾಲಾಡಿ ಸಮೀಪದ ಕಾಸಾಡಿ ಎಂಬಲ್ಲಿ ನಡೆದಿದ್ದು, ಕುಂದಾಪುರ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಬಿದ್ಕಲಕಟ್ಟೆ ಐಟಿಐ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಶಶಾಂಕ್ ಹಲ್ಲೆಗೊಳಗಾದ ಯುವಕ. ಬೆಳಿಂಜೆ ನಿವಾಸಿ ಶಶಾಂಕ್ ಅವರು ಸ್ನೇಹಿತರಾದ ಪ್ರಜ್ವಲ್, ಗಣೇಶ್ ಜೊತೆ ಬಸ್ಸಿನಲ್ಲಿ ತೆರಳುತ್ತಿದ್ದ, ಬಸ್ಸಿನಲ್ಲೇ ಇದ್ದ ಮುಸ್ಲಿಂ ಸ್ನೇಹಿತೆ ಜೊತೆ ಮಾತಾಡಿದ್ದಾನೆ. ಇದನ್ನು ಪ್ರಶ್ನಿಸಿ ಮುಸ್ಲಿಂ ಪುಂಡರು ನಾಲ್ವರ ತಂಡ ರಚಿಸಿ ಶಶಾಂಕ್ ಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ಮಾಡಿದವರ ಪೈಕಿ ಮೂವರು ಬಸ್ಸಿನಿಂದ ಇಳಿದುಹೋಗಿದ್ದು ಓರ್ವ ಮಾತ್ರ ಕುಂದಾಪುರದವರೆಗೆ ಬಸ್ಸಿನಲ್ಲೇ ಬಂದಿದ್ದಾನೆ ಎನ್ನಲಾಗಿದೆ. ಗಾಯಾಳು ಯುವಕನಿಗೆ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಿಂದು ಯುವಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ತಿಳಿದ ಕೂಡಲೇ ಹಿಂದೂ ಕಾರ್ಯಕರ್ತರು ಕುಂದಾಪುರ ಶಾಸ್ತ್ರೀ ವೃತ್ತದ ಬಳಿ ಜಮಾಯಿಸಿದ್ದರು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಸಿಪಿಐ ಗೋಪಿಕೃಷ್ಣ, ಪಿಎಸ್ಐ ಸದಾಶಿವ ಗವರೋಜಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.