ಹೊಸದಿಗಂತ ವರದಿ ಬಾಗಲಕೋಟೆ:
ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಕೊಲೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅದೇ ಮಾದರಿಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಮಗನಿಂದ ತಂದೆ ಕೊಲೆ ನಡೆದಿದೆ. ತಂದೆಯನ್ನು ಮೂವತ್ತು ತುಂಡುಗಳಾಗಿ ಕತ್ತರಿಸಿ ದೇಹವನ್ನು ಕೊಳವೆ ಬಾವಿಗೆ ಹಾಕಿದ್ದಾನೆ. ಕಳೆದ ಮಂಗಳವಾರ ಡಿಸೆಂಬರ್ 6 ರಂದು ರಾತ್ರಿ 12 ಗಂಟೆ ವೇಳೆ ಈ ಭಯಾನಕ ಕೃತ್ಯ ನಡೆದಿದೆ.
ಪರಶುರಾಮ ಕುಳಲಿ(54) ಕೊಲೆಯಾದ ವ್ಯಕ್ತಿ. ವಿಠ್ಠಲ ಕುಳಲಿ(20) ಕೊಲೆ ಮಾಡಿದ ಮಗ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ದೇಹ ಕೊಳವೆಬಾವಿಗೆ ಇಳಿಯದೆ ಇದ್ದಾಗ ಕೊಡಲಿಯಿಂದ ತುಂಡು ತಂಡು ಮಾಡಿ ಕೊಳವೆ ಬಾವಿಗೆ ಹಾಕಲಾಗಿದೆ.
ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮದೇ ಹೊಲದಲ್ಲಿನ ಬೋರ್ ವೆಲ್ ನಲ್ಲಿ ತಂದೆಯ ದೇಹದ ತುಂಡಗಳನ್ನು ಮಗ ಹಾಕಿದ್ದಾನೆ. ಕುಡಿದ ಮತ್ತಲ್ಲಿ ತಂದೆ ಮಗನಿಗೆ ಬೈಯೋದು ಹಲ್ಲೆ ಮಾಡೋದು ಹೊಡೆಯೋದು ಮಾಡುತ್ತಿದ್ದನಂತೆ. ಇದರಿಂದ ರೋಸಿ ಹೋದ ಮಗ ತಂದೆಯ ಪೀಸ್ ಪೀಸ್ ಆಗಿ ಕತ್ತರಿಸಿದ್ದಾನೆ.
ಕೊಳವೆ ಬಾವಿಯಲ್ಲಿ ಶವದ ತುಂಡುಗಳು ಪತ್ತೆಯಾಗಿದ್ದು, ಇದೀಗ ಕೊಲೆಗಡುಕನ ಬಣ್ಣ ಬಯಲಾಗಿದೆ. ಜೆಸಿಬಿಯಿಂದ ಕೊಳವೆಬಾವಿ ಅಗೆದು ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.