ಹೊಸದಿಗಂತ ವರದಿ,ಹೊನ್ನಾವರ :
ಬೃಹತ್ ಬಂಡೆಯೊಂದು ಗುಡ್ಡದ ಮೇಲಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದ ಘಟನೆ ತಾಲೂಕಿನ ಕಾಸರಕೋಡ ಸಮೀಪ ಹೊಸಪಟ್ಟಣದಲ್ಲಿ ನಡೆದಿದ್ದು ಭಾರೀ ಪ್ರಮಾಣದಲ್ಲಿ ಅನಾಹುತ ಸಂಭವಿಸುವುದು ಕೆಲವೇ ನಿಮಿಷಗಳ ಅಂತರದಲ್ಲಿ ತಪ್ಪಿದೆ.
ಹೊಸಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗಿರುವ ಮೇಲುಭಾಗದಲ್ಲಿ ರಸ್ತೆ ಕಾಮಗಾರಿಗಾಗಿ ಗುಡ್ಡ ಕೊರೆಯುವ ಕೆಲಸ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಬೃಹತ್ ಬಂಡೆ ಉರುಳಿ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ಬಿದ್ದಿದೆ.
ಅದೃಷ್ಟವಶಾತ್ ಆ ಸಮಯದಲ್ಲಿ ಯಾವುದೇ ವಾಹನ ಇಲ್ಲದ ಕಾರಣ ಅನಾಹುತ ತಪ್ಪಿದಂತಾಗಿದು ಘಟನೆ ನಡೆಯುವ ಕೆಲವೇ ಕ್ಷಣಗಳ ಹಿಂದೆ ಅಲ್ಲಿಂದ ವಾಹನಗಳು ಹಾದು ಹೋಗಿರುವುದಾಗಿ ತಿಳಿದು ಬಂದಿದೆ.
ಐ ಆರ್ ಬಿ ಕಂಪನಿಯವರು ಕಳೆದ ಕೆಲವು ದಿನಗಳಿಂದ ಗುಡ್ಡದ ಮೇಲೆ ಕಾಮಗಾರಿ ನಡೆಸುತ್ತಿದ್ದು ಕಳಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದು ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.