ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಉದ್ಧವ್ ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಅರ್ಜಿಯ ವಿಚಾರಣೆಯನ್ನು ನಾಳೆ ಮಅಡಲು ಸಾಧ್ಯವಿಲ್ಲ, ಇದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಬಂಡಾಯ ಸೇನೆಯ ಶಾಸಕರನ್ನು ಸರ್ಕಾರ ರಚಿಸಲು ಆಹ್ವಾನಿಸುವ ಮಹಾರಾಷ್ಟ್ರದ ರಾಜ್ಯಪಾಲರ ನಿರ್ಧಾರವನ್ನು ಅರ್ಜಿಯು ವಿರೋಧಿಸಿತ್ತು. ಈ ಕುರಿತು ಇಂದು ವಿಚಾರಣೆ ನಡೆಸಿದ ಕೋರ್ಟ್ ತುರ್ತಾಗಿ ಅರ್ಜಿಯ ವಿಚಾರನೆ ಸಾಧ್ಯವಿಲ್ಲವೆಂದಿದೆ ಹಾಗೂ 16 ಬಂಡಾಯ ಶಿವಸೇನೆ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಮಹಾರಾಷ್ಟ್ರದ ಸ್ಪೀಕರ್ಗೆ ತಿಳಿಸುವಂತೆ ಸಾಲಿಸಿಟರ್ ಜನರಲ್ಗೆ ಆದೇಶಿಸಿದೆ. ಈ ಕುರಿತಾದ ಬೆಳವಣಿಗೆಗಳ ಅಪ್ಡೇಟ್ ಇಲ್ಲಿದೆ.
- ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು “ಬೆದರಿಕೆ ಅಥವಾ ಆಫರ್ಗಳ ಒತ್ತಡಕ್ಕೆ ಮಣಿಯದೆ” ಕಠಿಣ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ 15 ಶಿವಸೇನೆ ಶಾಸಕರಿಗೆ ಧನ್ಯವಾದಗಳನ್ನು ಪತ್ರದ ಮೂಲಕ ತಿಳಿಸಿದ್ದಾರೆ.ಉದ್ಧವ್ ಅವರು ಇಂದು ತಮ್ಮ ನಿವಾಸದಲ್ಲಿ ಎಲ್ಲಾ ಶಿವಸೇನೆ ಸಂಸದರೊಂದಿಗೆ ಸಭೆಗೆ ಕರೆದಿದ್ದಾರೆ ಎಂದು ಮೂಲಗಳು ಹೇಳಿವೆ.
- ಸುಪ್ರೀಂ ಕೋರ್ಟ್ ಈ ವಿಷಯಗಳ ಬಗ್ಗೆ ತೀರ್ಪು ನೀಡಿದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿದೆ.
- ಶಿವಸೇನೆ ಸಂಸದ ಸಂಜಯ್ ರಾವುತ್ ಅವರು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಮನವಿ ಶಿಂಧೆ ಸರ್ಕಾರದ ಉಳಿವಿನ ಬಗ್ಗೆ ಅಲ್ಲ, ಆದರೆ ಅದು ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ. ಇದು ‘ಮುಕ್ತ ಮತ್ತು ನ್ಯಾಯಯುತ’ ನ್ಯಾಯಾಂಗಕ್ಕೆ ದೊಡ್ಡ ಪರೀಕ್ಷೆಯಾಗಿದೆ ಎಂದು ಅವರು ಹೇಳಿದ್ದಾರೆ.
- ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಕ್ಕು ಸಾಧಿಸಲಿದೆ. ಪಕ್ಷದಲ್ಲಿ ಬಂಡಾಯದ ಹಿನ್ನೆಲೆಯಲ್ಲಿ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಸಿಎಂ ಕುರ್ಚಿಯ ಮೇಲೆ ಹಕ್ಕು ಸಾಧಿಸಿದ ನಂತರ ಉದ್ಧವ್ ಬಣ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಬಯಸುತ್ತಿದೆ ಎನ್ನಲಾಗಿದೆ.