ಹೊಸದಿಗಂತ ವರದಿ ಬಾಗಲಕೋಟೆ:
ಹಿಂದೂಗಳ ಮೇಲಿನ ಹತ್ಯೆ ಖಂಡಿಸಿ ಕೆರೂರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸ್ವಯಂ ಪ್ರೇರಣೆಯಿಂದ ನಗರದಲ್ಲಿ ಅಂಗಡಿ ಮುಗ್ಗಟ್ಟಗಳು ಬಂದ್ ಆಗಿದ್ದವು, ವಾಹನ ಸಂಚಾರ ಮಾತ್ರ ಎಂದಿನಂತೆ ಇತ್ತು. ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ನೀಡಿರಲಿಲ್ಲ. ಟಂಟಂ, ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಕಂಡುಬಂದಿತು.
ತರಕಾರಿ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ನಡೆಯಿತು. ನವನಗರ, ವಿದ್ಯಾಗಿರಿ, ಹಳೆ ಬಾಗಲಕೋಟೆಯಲ್ಲಿ ಹೊಟೇಲ್ ಹಾಗೂ ಕಿರಾಣಿ ಸೇರಿದಂತೆ ಯಾವುದೇ ಅಂಗಡಿಗಳು ತೆರದಿರಲಿಲ್ಲ.
ನಗರದ ಕೊತ್ತಲೇಶ ದೇವಸ್ಥಾನ ಆವರಣದಿಂದ ಆರಂಭಗೊಂಡ ಹಿಂದೂ ಸಂಘಟನೆಗಳ ಎಚ್ಚರಿಕೆ ಹಾಗೂ ಧಿಕ್ಕಾರ ನೀಡುವ ಬೃಹತ್ ಪ್ರತಿಭಟನೆಗೆ ಮುರನಾಳ ಮಳೆ ರಾಜೇಂದ್ರಮಠದ ಮೌನೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಮತಾಂಧರಿಗೆ ಹಾಗೂ ಲವ್ ಜಿಹಾದಿಗಳಿಗೆ ಧಿಕ್ಕಾರದ ಘೋಷಣೆ ಕೂಗಲಾಯಿತು. ಪ್ರತಿಭಟನೆ ಹಿನ್ನೆಲೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.