ಶಿವನ ಪೂಜೆಗೆ ತೆರಳಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ

ದಿಗಂತ ವರದಿ ಮಡಿಕೇರಿ:

ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಸಮೀಪದ ಮಾಲ್ದಾರೆಯ ಗದ್ದಿಗೆ ಬೆಟ್ಟದಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ನವಿಲೂರು ಕಂಡಿಬೆಟ್ಟ ಹಾಡಿಯ ನಿವಾಸಿ ಶಿವಣ್ಣ (50) ಎಂಬವರೇ ಮೃತ ದುರ್ದೈವಿ.
ಪ್ರತಿ ಸೋಮವಾರ ಮಾಲ್ದಾರೆಯ ಗದ್ದಿಗೆ ಬೆಟ್ಟದಲ್ಲಿರುವ ಸಿದ್ದೇಶ್ವರ ದೇವಾಲಯಕ್ಕೆ ಶಿವಣ್ಣ ಪೂಜೆಗೆಂದು ತೆರಳುತ್ತಿದ್ದರೆನ್ನಲಾಗಿದ್ದು, ಈ ಸಂದರ್ಭ ಕಾಡಾನೆ ದಾಳಿ ನಡೆಸಿದ ಪರಿಣಾಮ ಶಿವಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದೇವಾಲಯದ ಅರ್ಚಕ ಮಲ್ಲಿಕಾರ್ಜುನ ಎಂಬವರು ಪೂಜೆಗೆ ತೆರಳುವ ಸಂದರ್ಭ ಮೃತದೇಹ ಕಂಡು ಬಂದಿದ್ದು, ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಉಪವಲಯ ಅರಣ್ಯಧಿಕಾರಿ ಚೇರನ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಶ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.
ಮೃತದೇಹವನ್ನು ಪಿರಿಯಾಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!