ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಮೂರು ಮರಗಳು ಉರುಳಿ ಬಿದ್ದು ಸುಮಾರು ಎರಡು ತಾಸಿಗಿಂತ ಅಧಿಕ ಸಮಯ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಟ ನಡೆಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಶನಿವಾರ ಚಾರ್ಮಾಡಿ ಘಾಟಿ ಸೇರಿದಂತೆ ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು ಮಧ್ಯಾಹ್ನ ಮಳೆಯೊಂದಿಗೆ ಬೀಸಿದ ಗಾಳಿಗೆ ಘಾಟಿಯ ಎಂಟನೇ ತಿರುವಿನಲ್ಲಿ ಬೃಹತ್ ಗಾತ್ರದ ಮರ,ಸಮೀಪದ ಇನ್ನೆರಡು ಮರಗಳೊಂದಿಗೆ ರಸ್ತೆಗೆ ಉರುಳಿ ಬಿತ್ತು. ಎಂಟನೇ ತಿರುವಿನ ಮೇಲ್ಭಾಗದ ರಸ್ತೆಯಿಂದ ಏಕಕಾಲದಲ್ಲಿ ಈ ಮೂರು ಮರಗಳು ಕೆಳಭಾಗದ ರಸ್ತೆಗೆ ಉರುಳಿದವು. ಈ ವೇಳೆ ಮರಗಳು ಉರುಳಿದ ರಸ್ತೆ ಭಾಗದಲ್ಲಿ ಯಾವುದೇ ವಾಹನ ಸಂಚಾರ ಇರಲಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಈ ಸ್ಥಳದಲ್ಲಿ ಮರಗಳು ಹತ್ತಿರ ಹತ್ತಿರವಿದ್ದು ಒಂದು ಮರ ಉರುಲಳುವ ವೇಳೆ ಅದು ಸಮೀಪದ ಮರಗಳಿಗೆ ಬಡಿಯುವ ಕಾರಣ ಅವು ಉರುಳಿ ಬೀಳುತ್ತವೆ.
ಮರಗಳು ಉರುಳಿದ ಕಾರಣ ಘಾಟಿ ಪ್ರದೇಶದಲ್ಲಿ ಸುಮಾರು 2 ಗಂಟೆಗಿಂತ ಅಧಿಕ ಸಮಯ ಟ್ರಾಫಿಕ್ ಜಾಮ್ ಉಂಟಾಯಿತು ಇದರಿಂದ ಘಾಟಿಯ ಇಕ್ಕೆಲಗಳಲ್ಲಿ ನಾಲ್ಕಾರು ಕಿಲೋಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಶನಿವಾರವಾದ ಕಾರಣ ವಾಹನದಟ್ಟಣೆಯು ಅಧಿಕವಿತ್ತು. ವಿಪರೀತ ಮಳೆಯ ಸುರಿಯುತ್ತಿದ್ದು ವಾಹನ ಸವಾರರು,ಪ್ರವಾಸಿಗರು ಪರದಾಟ ನಡೆಸುವಂತಾಯಿತು.
ಮರಗಳು ಉರುಳಿದ ಮಾಹಿತಿ ಪಡೆದ ತಕ್ಷಣ ಧರ್ಮಸ್ಥಳ ಪೊಲೀಸರು,ಅರಣ್ಯ ಇಲಾಖೆ,ಚಾರ್ಮಾಡಿ ಹಸನಬ್ಬ ಮತ್ತು ತಂಡ, ಇಸ್ಮಾಯಿಲ್, ಮುಬಶೀರ್ ಪ್ರಜ್ವಲ್, ಕೆವಿ.ಗೌಡ ಹಾಗೂ ಸ್ಥಳೀಯರು ಸ್ಥಳಕ್ಕೆ ತೆರಳಿ ನಿರಂತರ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ಚಾರ್ಮಾಡಿ ಘಾಟಿಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಯಾವುದೇ ಅನಾಹುತ ಸಂಭವಿಸಿದರು ಅದರ ಬಗ್ಗೆ ತಕ್ಷಣ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ.ಈ ಕಾರಣದಿಂದ ಇಲ್ಲಿ ಕಾರ್ಯಾಚರಣೆ ತಡವಾಗುತ್ತಿದೆ. ಇದರಿಂದ ವಾಹನ ಸವಾರರು ಪ್ರಯಾಣಿಕರು ಯಾವ ಘಾಟಿಯಲ್ಲಿ ಯಾವುದೇ ಸಮಸ್ಯೆ ಉಂಟಾದಾಗ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಪ್ರಸ್ತುತ ಭಾರಿ ಮಳೆ ಸುರಿಯುತ್ತಿದ್ದು ಚಾರ್ಮಾಡಿ ಘಾಟಿ ಮೂಲಕ ಸಂಚರಿಸುವಾಗ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.