ಹೊಸದಿಗಂತ ಡಿಜಿಟಲ್ ಡೆಸ್ಕ್
ಕುಮಟಾ ತಾಲೂಕಿನ ಮಿರ್ಜಾನಿನ ರಾಮನಗರ ನಿವಾಸಿ ಸುಬ್ರಹ್ಮಣ್ಯ ನಾಯ್ಕ ಅವರ ಮನೆಯಲ್ಲಿ ಅಪರೂಪದ ಬಿಳಿ ಹಾವು ಕಾಣಿಸಿಕೊಂಡು ಸಾರ್ವಜನಿಕರನ್ನು ಸೋಜಿಗಕ್ಕೀಡುಮಾಡಿತ್ತು. ವಿಚಾರ ತಿಳಿದ ಉರಗ ತಜ್ಞ ಪವನ್ ಎಮ್ ನಾಯ್ಕ ಅವರು ಸ್ಥಳಕ್ಕೆ ತೆರಳಿ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಅಷ್ಟಕ್ಕೂ ಅತ್ಯಂತ ಅಪರೂಪ ಎಂದು ಪರಿಗಣಿಸಲಾದ ಬಿಳಿ ಹೆಬ್ಬಾವು ಈ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು ಹೇಗೆ? ಎನ್ನುವುದರ ಬಗ್ಗೆ ಪವನ್ ನಾಯ್ಕ ಮಾಹಿತಿ ನೀಡಿದ್ದಾರೆ.
ಇಂತಹ ಹೆಬ್ಬಾವುಗಳು ಬೇರೆಯ ಜಾತಿಯ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ʼಮೆಲಾಲಿನ್ʼ ಅಥವಾ ʼಪಿಗ್ಮೆಂಟ್ʼನ ಕೊರತೆಯಿಂದ ಅವುಗಳ ಚರ್ಮಕ್ಕೆ ನೈಸರ್ಗಿಕ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣದಲ್ಲಿ ಹುಟ್ಟುತ್ತವೆ. ಇದನ್ನ ಅಲ್ಬಿನೋ ಸ್ನೇಕ್ಸ್ ಎಂದು ಸಹ ಕರೆಯುತ್ತಾರೆ. ಆದರೆ ಅಲ್ಬಿನೋ ಹಾವುಗಳಾದರೆ ಕಣ್ಣು ಸಹ ಕೆಂಪು ಮಿಶ್ರಿತ ಬಿಳಿ ಬಣ್ಣ ಇರಬೇಕಾಗುತ್ತದೆ. ಇದರ ಕಣ್ಣು ಅರ್ಧ ಮಾತ್ರ ಬಿಳಿ ಇದ್ದು ಇನ್ನರ್ಧ ಕಪ್ಪಿರೋ ಕಾರಣ ಇಲ್ಲಿ ಪತ್ತೆಯಾಗಿರುವ ಹಾವನ್ನು ಅಲ್ಬಿನೋ ಹಾವಿನ ಗುಂಪಿಗೆ ಸೇರಿಸಲು ಸಾಧ್ಯವಿಲ್ಲ. ಆದರೂ ಇದು ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವುದು ಕೇವಲ ಎರಡನೇ ಬಾರಿಯಷ್ಟೇ. ಹಾವನ್ನು ಹಿಡಿದು ಸುರಕ್ಷಿತ ಜಾಗಕ್ಕೆ ಬಿಡಲಾಗಿದೆ ಎಂದು ಪವನ್ ನಾಯ್ಕ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ