ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯ ಹಗರಣದ ವಿಚಾರ ಮರೆಯುವ ಮುನ್ನವೇ ದೆಹಲಿಯ ಆಮ್ ಆದ್ಮಿ ಸರ್ಕಾರ ಮತ್ತೊಂದು ವಿವಾದಕ್ಕೆ ಸಿಲುಕಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಲೋಫ್ಲೋರ್ ಬಸ್ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಬಿಐಗೆ ದೂರು ಸಲ್ಲಿಸಿದ್ದು, ಅವುಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ದೆಹಲಿ ಸಾರಿಗೆ ನಿಗಮವು BS-IV ಮತ್ತು BS-VI ಮಾನದಂಡಗಳ 1,000 ಲೋ ಫ್ಲೋರ್ ಬಸ್ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕು ಎಂದು ವಿ.ಕೆ.ಸಕ್ಸೇನಾ ಸಿಬಿಐಗೆ ದೂರು ನೀಡಿದ್ದಾರೆ. ದೂರು ನೀಡಿದ ಹಿನ್ನೆಲೆ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ.
ತನಿಖೆ ಕುರಿತು ಎಎಪಿ ಶಾಸಕ ಸೌರಭ್ ಭಾರದ್ವಾಜ್ ಕೆಂಡಾಮಂಡಲರಾಗಿದ್ದಾರೆ. ಎಲ್ಜಿ ಆರೋಪಿಸಿದಂತೆ ಬಸ್ಗಳ ಖರೀದಿಯೇ ಇನ್ನೂ ನಡೆದಿಲ್ಲ ಜೊತೆಗೆ ಟೆಂಡರ್ ಪ್ರಕ್ರಿಯೆಯನ್ನೂ ರದ್ದುಗೊಳಿಸಲಾಗಿದೆ ಎಂದರು. ಎಲ್ಜಿ ವಿರುದ್ಧ ಹಲವು ಭ್ರಷ್ಟಾಚಾರ ಆರೋಪಗಳಿವೆ. ಅದಕ್ಕೆ ಉತ್ತರ ನೀಡದೆ ತನ್ನ ಭ್ರಷ್ಟಾಚಾರದಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡುತ್ತಿದೆ.
ಎಲ್ಲವನ್ನೂ ತನಿಖೆ ಮಾಡಿದ್ದಾಯಿತು ಎಲ್ಲಿಯೂ ಭ್ರಷ್ಟಾಚಾರ ನಡೆದಿರುವ ಪುರಾವೆಗಳಿಲ್ಲ. ಮೂವರು ಸಚಿವರ ವಿರುದ್ಧ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಮತ್ತೊಬ್ಬ ಸಚಿವರ ಬಗ್ಗೆ ದೂರುತ್ತಿದ್ದಾರೆ. ಎಎಪಿ ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು ಅವರು ತಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮಾತನಾಡಬೇಕು ಎಂದು ಆಪ್ ಶಾಸಕ ತಿರುಗಿಬಿದ್ದರು.