ತಪಸ್‌ ವಿದ್ಯಾರ್ಥಿಗಳ ಸಾಧನೆ: ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ 12 ವಿದ್ಯಾರ್ಥಿಗಳು ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
2022ನೇ ಸಾಲಿನ ಜೆಇಇ ಅಡ್ವಾನ್ಸ್‌ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು ಬೆಂಗಳೂರಿನ ರಾಷ್ಟ್ರೋತ್ಥಾನ- ತಪಸ್‌ ಕೇಂದ್ರದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ತಪಸ್‌ ನ ಒಟ್ಟೂ 39 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು ಅವರಲ್ಲಿ 12 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಆಯ್ಕೆಯಾಗಿ ದೇಶದ ಪ್ರತಿಷ್ಟಿತ ಐಐಟಿ (ಇಂಡಿಯನ್ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ) ಗೆ ಆಯ್ಕೆಯಾಗಲು ಅರ್ಹತೆ ಪಡೆದಿದ್ದಾರೆ. ಉಳಿದ 27‌ ವಿದ್ಯಾರ್ಥಿಗಳು ಎನ್‌ಐಟಿ (ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ) ಗೆ ಆಯ್ಕೆಯಾಗುವಷ್ಟು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಇವರಲ್ಲಿ ಉಡುಪಿಯ ಸ್ಕಂದ ಐತಾಳ್‌ 1751ನೇ ರ್ಯಾಂಕ್‌ ಹಾಗೂ ವರ್ಗವಾರು 188 ರ್ಯಾಂಕ್‌ ಪಡೆದು ತಪಸ್‌ ನ ಒಂಭತ್ತು ಬ್ಯಾಚ್‌ ಗಳ ವಿದ್ಯಾರ್ಥಿಗಳಲ್ಲೇ ಅತಿ ಹೆಚ್ಚು ಅಂಕ ಪಡೆದಿದ್ದಾನೆ. ಉಳಿದಂತೆ ಬೆಂಗಳೂರಿನ ಲಿಖಿತ್‌ ಆರ್‌ 4833(932)ರ್ಯಾಂಕ್‌, ಮಂಡ್ಯದ ಪ್ರಕಾಶ್‌ ಗೌಡ ಟಿ ಆರ್‌ 7262(1514)ರ್ಯಾಂಕ್‌, ಮಂಡ್ಯದ ಚಂದ್ರು ಸಿಪಿ 9005(1157)ರ್ಯಾಂಕ್‌, ಉಡುಪಿಯ ಕಾರ್ತಿಕ್‌ ಸತೀಶ್‌ 11799 (2722)ರ್ಯಾಂಕ್‌, ಬೆಳಗಾವಿಯ ಸಾಗರ ಶಿವಲಿಂಗಪ್ಪ ಅಥಣಿ 16540 (4071)ರ್ಯಾಂಕ್‌, ಶಿವಮೊಗ್ಗದ ಸುಮುಖ ಸುಬ್ರಮಣ್ಯ ಶೆಟ್ಟಿ 17654(4487)ರ್ಯಾಂಕ್‌, ಚಿಕ್ಕಮಗಳೂರಿನ ಸಾಯಿ ಚಿರಂತನ್‌ ಎಚ್‌ ಎಂ 25256(6682)ರ್ಯಾಂಕ್‌, ಬೆಳಗಾವಿಯ ಅವಿಷ್ಕಾರ್‌ ಧವಳೆ 25277(3747)ರ್ಯಾಂಕ್‌, ಬಾಗಲಕೋಟೆಯ ಚನ್ನಪ್ಪ ಎನ್‌ ಕಲಹಲ್‌ (4789)ರ್ಯಾಂಕ್‌, ಬೆಳಗಾವಿಯ ಗಿರೀಶ್‌ ಭಜಂತ್ರಿ (1294)ರ್ಯಾಂಕ್‌, ಹಾಗೂ ಬಳ್ಳಾರಿಯ ರಘುನಾಯಕ್‌ (3567)ರ್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯುಳ್ಳವರಾಗಿದ್ದು ಆರ್ಥಿಕವಾಗಿ ದುರ್ಬಲ ವರ್ಗದಿಂದ ಬಂದವರಾಗಿದ್ದು ಕನ್ನಡ ಮಾಧ್ಯಮ ಶಿಕ್ಷಣದ ಹಿನ್ನೆಲೆಯುಳ್ಳವರು ಎಂಬುದು ವಿಶೇಷ ಸಂಗತಿಯಾಗಿದೆ.

ತಪಸ್‌ ಎಂಬುದು ಕರ್ನಾಟಕದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಪ್ರತಿಭಾನ್ವಿತ ಮತ್ತು ಅರ್ಹ ಬಡ ಗಂಡು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯಾಗಿದೆ. ರಾಷ್ಟ್ರೋತ್ಥಾನವು 2012ರಲ್ಲಿ ತಪಸ್‌ ಯೋಜನೆಯನ್ನು ಪ್ರಾರಂಭಿಸಿದ್ದು ಇಲ್ಲಿಯವರೆಗೆ ಅಂದರೆ2022ರ ವರೆಗೆ ಒಟ್ಟೂ 9 ಬ್ಯಾಚ್‌ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ವರ್ಷಕ್ಕೆ 40 ವಿದ್ಯಾರ್ಥಿಗಳಂತೆ ಒಟ್ಟೂ 392 ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ಶಿಕ್ಷಣ ಪಡೆದಿದ್ದು ಅವರಲ್ಲಿ 26 ವಿದ್ಯಾರ್ಥಿಗಳು ಐಐಟಿಗೆ ಹಾಗೂ 65 ವಿದ್ಯಾರ್ಥಿಗಳು ಎನ್‌ಐಟಿ ಗೆ ಪ್ರವೇಶ ಪಡೆದಿದ್ದಾರೆ.

ತಪಸ್‌ ಯೋಜನೆಗೆ ವಿವಿಧ ಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಕೊಳ್ಳಲಾಗುತ್ತದೆ. ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಪದವಿ ಪೂರ್ವ ಶಿಕ್ಷಣದ ಜೊತೆಗೆ ಐಐಟಿ, ಜೆಇಇ, ತರಬೇತಿಯನ್ನು ನೀಡಲಾಗುತ್ತದೆ. ಉಚಿತ ವಸತಿ, ಊಟ, ಶಿಕ್ಷಣ ಹಾಗು ಇನ್ನಿತರೇ ಸವಲತ್ತುಗಳನ್ನೊದಗಿಸಿ ಅವರಿಗೆ ದೇಶದ ಐಐಟಿ, ಎನ್‌ಐಟಿ ಹಾಗು ಇತರೇ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ತಪಸ್‌ ಸಹಕರಿಸುತ್ತದೆ.

ಈವರೆಗೆ ಒಟ್ಟೂ 26,181 ವಿದ್ಯಾರ್ಥಿಗಳು ತಪಸ್‌ ಪ್ರವೇಶ ಪರೀಕ್ಷೆಯನ್ನು ಬರೆದಿದ್ದು ಪ್ರತಿವರ್ಷ ಸುಮಾರು 4000ದಷ್ಟು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಪ್ರಸ್ತುತ 2023 – 24ನೇ ಸಾಲಿನ ತಪಸ್‌ ಪ್ರವೇಶ ಪರೀಕ್ಷೆಗೆ ಅರ್ಜಿ ಬಿಡುಗಡೆ ಮಾಡಲಾಗಿದ್ದು ಸೆ.15 ರಿಂದ ಡಿ.10 ರವರೆಗೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಾಲತಾಣ : www.tapassaadhana.org ಅಥವಾ ದೂರವಾಣಿ ಸಂಖ್ಯೆ 94812 01144/ 98446 02529/ 79759 13828 ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!