ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ನಂದಮೂರಿ ತಾರಕರತ್ನ ಪಾದಯಾತ್ರೆ ವೇಳೆ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚೇತರಿಸಿಕೊಳ್ಳುವ ಮುನ್ನವೇ ನಂದಮೂರಿ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹಿರಿಯ ಎನ್ಟಿಆರ್ ಪುತ್ರ ನಂದಮೂರಿ ರಾಮಕೃಷ್ಣ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ-10 ರಲ್ಲಿ ಪ್ರಯಾಣಿಸುತ್ತಿದ್ದಾಗ ಇಂದು ಮುಂಜಾನೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ರಾಮಕೃಷ್ಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆದರೆ ಕಾರು ಸಂಪೂರ್ಣ ಜಖಂಗೊಂಡಿದೆ. ರಾಮಕೃಷ್ಣ ಚಿಕಿತ್ಸೆ ನಂತರ ಸದ್ಯ ಆರೋಗ್ಯವಾಗಿದ್ದಾರೆ.
ಘಟನೆಯಿಂದ ನಂದಮೂರಿ ಅಭಿಮಾನಿಗಳು ಕಂಗಾಲಾಗಿದ್ದಾರೆ. ನಂದಮೂರಿ ಕುಟುಂಬದಲ್ಲಿ ಸತತ ದುರಂತಗಳು ನಡೆಯುತ್ತಿವೆ. ಈ ಹಿಂದೆ ನಂದಮೂರಿ ಹರಿಕೃಷ್ಣ, ನಂದಮೂರಿ ಜಾನಕಿರಾಮ್ ಕಾರು ಅಪಘಾತಕ್ಕೀಡಾಗಿದ್ದು, ಎನ್ ಟಿಆರ್ ಕೂಡ ಅಪಘಾತಕ್ಕೀಡಾಗಿದ್ದರು.. ಇದೀಗ ನಂದಮೂರಿ ರಾಮಕೃಷ್ಣ ಕಾರು ಅಪಘಾತಕ್ಕೀಡಾಗಿದ್ದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಕಾರು ಅಪಘಾತದ ಬಗ್ಗೆ ನಂದಮೂರಿ ರಾಮಕೃಷ್ಣ ಅವರ ಕುಟುಂಬ ಯಾವುದೇ ಘೋಷಣೆ ಮಾಡಿಲ್ಲ. ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಕೂಡ ತಿಳಿಸಿದ್ದಾರೆ. ಅಪಘಾತವಾದ ಕಾರನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.