ಹೊಸದಿಗಂತ ವರದಿ ಕೊಡಗು
ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮೊಟ್ಟೆ ಎಸೆದ ಆರೋಪಿ ಸಂಪತ್ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ. ಕುಶಾಲನಗರ ನ್ಯಾಯಾಲಯಕ್ಕೆ ಶರಣಾಗಲು ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. “ಮೂಲತಃ ನಾನು ಜೆಡಿಎಸ್ ಪಕ್ಷದವನು. ಮಾಜಿ ಸಚಿವ ಜೀವಿಜಯ ಬೆಂಬಲಿಗನಾಗಿದ್ದು, ಜೀ ವಿಜಯ ಜೊತೆಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆ ಗೊಂಡಿದ್ದೇನೆ” ಎಂದು ಬಂಧನಕ್ಕೂ ಮೊದಲು ಆರೋಪಿ ಸಂಪತ್ ಹೇಳಿಕೊಂಡಿದ್ದಾರೆ.
“ವೈಯಕ್ತಿಕ ಕಾರ್ಯಕ್ಕೆ ಅಂದು ಗುಡ್ಡೆಹೊಸೂರಿಗೆ ಆಗಮಿಸಿದ್ದೆ. ಸಿದ್ದರಾಮಯ್ಯ ಹಿಂದೂ ವಿರೋಧಿ ಹೇಳಿಕೆಯಿಂದ ಆಕ್ರೋಶಿತಗೊಂಡ ನಾನು ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆಯನ್ನು ಎಸೆದಿದ್ದೇನೆ” ಎಂದು ಆರೋಪಿ ಸ್ಪಷ್ಟಪಡಿಸಿದ್ದಾರೆ.
ಮಳೆಯಿಂದ ಪ್ರವಾಹ ಉಂಟಾಗಿ ಹಾನಿಗೀಡಾದ ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ ತಾಲೂಕುಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾಗ ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಎಂಬಲ್ಲಿ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆಯಲಾಗಿತ್ತು. ಕುಶಾಲನಗರದ ಗ್ರಾಮಾಂತರ ಪೊಲೀಸರು ಈ ಪ್ರಕರಣದಲ್ಲಿ ಬಂಧಿಸುವುದಕ್ಕಿಂತ ಕೊಂಚ ಮುಂಚಿತವಾಗಿ ಸಂಪತ್ ಹೇಳಿಕೆ ನೀಡಿದ್ದಾನೆ. ಈ ಪ್ರಕರಣದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ʼನಮ್ಮ ಕಾರ್ಯಕರ್ತರಿಗೂ ಮೊಟ್ಟೆ ಹೊಡೆಯಲು ಬರುವುದಿಲ್ಲವೇ ಎಂದು ಹರಿಹಾಯ್ದಿದ್ದರು. ಇದೀಗ ಮೊಟ್ಟೆ ಎಸೆದಿದ್ದು ನಾನೇ ಎಂದು ಕಾಂಗ್ರೆಸ್ ಕಾರ್ಯಕರ್ತ ಒಪ್ಪಿಕೊಂಡಿದ್ದು ಕಾಂಗ್ರೆಸ್ ಪ್ರತಿಕ್ರಿಯೆ ಏನಿರಲಿದೆ ಕಾದು ನೋಡಬೇಕಿದೆ. ಈ ಪ್ರಕರಣ ರಾಜ್ಯಾದ್ಯಂತ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು ಕಾಂಗ್ರೆಸ್-ಬಿಜೆಪಿ ಮಧ್ಯೆ ಮತ್ತೊಂದು ಮಹಾಯುದ್ಧಕ್ಕೆ ನಾಂದಿ ಹಾಡಿದೆ.
ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿ ಆ.26ರಂದು ಮಡಿಕೇರಿ ಚಲೋ ಪ್ರತಿಭಟನೆ ನಡೆಲು ಕಾಂಗ್ರೆಸ್ ಮುಂದಾಗಿದ್ದರೆ, ಇದಕ್ಕೆ ಪ್ರತಿಯಾಗಿ ಅದೇ ದಿನ ಬಿಜೆಪಿ ಜನಜಾಗೃತಿ ಸಮಾವೇಶ ನಡೆಸುವುದಾಗಿ ಘೋಷಿಸಿದೆ.
ಅಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿ ಗಾಂಧಿ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ