ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಮಹತ್ವದ ಹೆಜ್ಜೆಯನ್ನಿರಿಸಿದ್ದು, ವಿವಿಧ ಜಿಲ್ಲೆಗಳಿಗೆ ತಂಡಗಳನ್ನು ಕಳಿಸಿ ಅಭ್ಯರ್ಥಿ ಆಯ್ಕೆಗೆ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಅಭಿಪ್ರಾಯ ಸಂಗ್ರಹದ ಮಾನದಂಡವನ್ನು ಆಧಾರವಾಗಿ ಇಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಇದೇ ಕಾರಣದಿಂದಾಗಿ ನಾನು, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಹಾಗೂ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಬಳ್ಳಾರಿಗೆ ಬಂದಿದ್ದೇವೆ. ಕಾರ್ಯಕರ್ತರ ಅಭಿಪ್ರಾಯ ನಮಗೆ ಅತೀ ಮುಖ್ಯವಾಗಿದೆ ಎಂದಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ನಾವು ಮುಂದಿದ್ದೇವೆ. ವಾತಾವರಣ ನಮ್ಮ ಪರವಾಗಿದೆ. ಜನರ ಒಲವು ನಮ್ಮ ಕಡೆಗಿದೆ. ವಿಜಯ ಸಂಕಲ್ಪ ಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಇವತ್ತು ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿಗೆ ಕ್ಷೇತ್ರಕ್ಕಾಗಿ ಪರದಾಡುವ ಸ್ಥಿತಿ ಇದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಾಣಲಿದೆ ಎಂದು ತಿಳಿಸಿದರು.
ಪಕ್ಷ ಬಿಡುವುದು ಸಾಮಾನ್ಯ
ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜೀನಾಮೆ ನೀಡಲು ಸ್ಪೀಕರ್ ಬಳಿ ತೆರೆಳಿದ್ದಾರೆ. ಅವರ ಜತೆ ಮಾತನಾಡಿದ್ದೇನೆ. ಚುನಾವಣಾ ಸಮಯದಲ್ಲಿ ಪಕ್ಷ ಬಿಟ್ಟು ಇನ್ನೊಂದು ಕಡೆ ಹೋಗುವುದು ರಾಜಕಾರಣದಲ್ಲಿ ಸರ್ವೇ ಸಾಮಾನ್ಯ, ಹಾಗೇ ಬೇರೆ ಪಕ್ಷದಿಂದಲೂ ಬಿಜೆಪಿಗೆ ಬರಲು ಹಲವರು ತಯಾರಿದ್ದಾರೆ. ಗೋಪಾಲಕೃಷ್ಣರ ಜತೆ ಬೇರೆ ಯಾರೂ ಹೋಗುತ್ತಿಲ್ಲ ಎಂದಿದ್ದಾರೆ.