ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಿಳಿಂಜಮ್ನಲ್ಲಿ ಉದ್ದೇಶಿತ ಬಂದರು ನಿರ್ಮಾಣ ಯೋಜನೆ ವಿರುದ್ಧ ಪಟ್ಟಭದ್ರ ಹಿತಾಸಕ್ತ ಗುಂಪುಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಬೆನ್ನಿಗೇ ಕೇರಳ ಪೊಲೀಸರು ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.
ಈಗಾಗಲೇ ಪೊಲೀಸರು ಪಾದ್ರಿಗಳು ಸೇರಿದಂತೆ 3000 ಕ್ಕೂ ಅಧಿಕ ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದ್ದು, ಗುಂಪು ಘರ್ಷಣೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.
ದೇಶದ ಹಿತಾಸಕ್ತಿಯಲ್ಲಿ ಮಹತ್ವದ ಯೋಜನೆಯಾದ ಈ ಬೃಹತ್ ಬಂದರು ಯೋಜನೆಗೆ ತಡೆ ಒಡ್ಡಲು ಮತ್ತು ವಿಳಂಬಗೊಳಿಸುವ ಹುನ್ನಾರದೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. 73,500 ಕೋಟಿ ರೂ.ಗಳ ಈ ಬೃಹತ್ ಯೋಜನೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿನಲ್ಲಿ ಭಾರೀ ಲಾಭ ತಂದುಕೊಡಲಿದೆ.
ಕೆಲವು ಚರ್ಚ್ ಪಾದ್ರಿಗಳ ನೇತೃತ್ವದ ಪ್ರತಿಭಟನಾಕಾರರು ಈ ಯೋಜನೆಯ ವಿರೋಧದ ಹಿಂದಿದ್ದು, ಪ್ರತಿಭಟನೆಯಿಂದಾಗಿ ಈಗಾಗಲೇ 3 ತಿಂಗಳ ಕಾಲ ಯೋಜನೆ ವಿಳಂಬವಾದಂತಾಗಿದೆ. ಈ ಯೋಜನೆಯಿಂದ ಸಮುದ್ರ ಕೊರೆತಕ್ಕೆ ಕಾರಣವಾಗಿ ಅದರಿಂದ ತಮ್ಮ ಬದುಕಿಗೆ ಧಕ್ಕೆ ಉಂಟಾಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಾರೆ. ಆದರೆ ಅಂತಹ ಯಾವುದೇ ಅಪಾಯ ಇಲ್ಲ.
ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದ ಬಳಿಕ ಸಂಪೂರ್ಣ ಕಾನೂನು ಬದ್ಧವಾಗಿ ಯೋಜನೆ ಆರಂಭಿಸಲಾಗಿದೆ ಎಂದು ಅದಾನಿ ಉದ್ಯಮ ಸಮೂಹ ತಿಳಿಸಿದೆ. ಈ ಯೋಜನೆಯಿಂದ ಸಮುದ್ರ ಕೊರೆತ ಉಂಟಾಗುತ್ತದೆ ಎಂಬುದು ಸುಳ್ಳು ಪ್ರಚಾರ ಎಂದು ಕೇರಳದ ಎಡರಂಗ ಸರಕಾರವೂ ಸ್ಪಷ್ಟಪಡಿಸಿದೆ.