ಕಲಬುರಗಿ ಪಾಲಿಕೆ ಮೇಯರ್ ಚುನಾವಣೆ: ತಾತ್ಕಾಲಿಕ ತಡೆಯಾಜ್ಞೆ ನೀಡಿದ ವಿಭಾಗೀಯ ಪೀಠ

 ಹೊಸ ದಿಗಂತ ವರದಿ, ಕಲಬುರಗಿ:

ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸಂಬಂಧ ಗುರುವಾರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಬಿಜೆಪಿ ಪಕ್ಷ ಸಲ್ಲಿಸಿದ್ದ ಮೇಲ್ಮನವಿ ಇತ್ಯರ್ಥ ಆಗುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದ್ದು, ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠವು ತಾತ್ಕಾಲಿಕವಾಗಿ ತಡೆ‌ ನೀಡಿದೆ.

ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಐವರು ಪರಿಷತ್ ಸದಸ್ಯರ ಹೆಸರು ಸೇರ್ಪಡೆ ಮತ್ತು ಮೇಯರ್ ಮೀಸಲಾತಿ ಬದಲಾವಾಣೆ ಮಾಡಿದ್ದನ್ನು ಪ್ರಶ್ನಿಸಿ, ಕಾಂಗ್ರೆಸ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಿತ್ತು. ಕಾಂಗ್ರೆಸ್ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಹಳೇ ಮೀಸಲಾತಿ ಮತ್ತು ಹಳೇ ಮತದಾರರ ಪಟ್ಟಿಯಂತೆ ತಿಂಗಳೊಳಗೆ ಚುನಾವಣೆ ‌ನಡೆಸುವಂತೆ ಆದೇಶ ಹೊರಡಿಸಿತ್ತು. ಆದಾದನಂತರ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಬಿಜೆಪಿಯು ಫೆಬ್ರವರಿ 4 ರಂದು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಗುರುವಾರ ಅರ್ಜಿ ವಿಚಾರಣೆ ‌ನಡೆಸಿದ ದ್ವಿ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ‌ ಎಸ್. ಆರ್. ಕೃಷ್ಣಕುಮಾರ್ ಮತ್ತು ನ್ಯಾಯಮೂರ್ತಿ ಶ್ರೀಮತಿ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ, ಒಂದು ತಿಂಗಳೊಳಗೆ ಚುನಾವಣೆ ‌ನಡೆಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಾತ್ಕಾಲಿಕ ತಡೆ‌ ನೀಡಿ ವಿಚಾರಣೆಯನ್ನು ಮುಂದೂಡಿಸಿ ಆದೇಶ ಹೊರಡಿಸಿದೆ.

ವರ್ಚುವಲ್ ಮೂಲಕ ನಡೆದ ಅರ್ಜಿ ವಿಚಾರಣೆಯಲ್ಲಿ ಬಿಜೆಪಿ ಪರವಾಗಿ ನ್ಯಾಯವಾದಿ ಅಶೋಕ್​ ಹಾರನಹಳ್ಳಿ ಮತ್ತು ಅಡ್ವೋಕೆಟ್ ಜನರಲ್ ನಾವದಗಿ ವಾದ ಮಂಡಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!