ಹೊಸದಿಗಂತ ವರದಿ, ಮೈಸೂರು:
ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಟೀಕಿಸುವ ಭರದಲ್ಲಿ ನಾನು ವಕೀಲರಿಗೆ ಯಾವುದೇ ರೀತಿಯಲ್ಲೂ ಅವಮಾನ ಮಾಡಿಲ್ಲ. ಈ ವಿಚಾರವಾಗಿ ಕಾಂಗ್ರೆಸ್ನವರು ಮಾಡುತ್ತಿರುವ ಅಪಪ್ರಚಾರದ ಬಗ್ಗೆ ವಕೀಲರು ಕಿವಿಗೊಡಬಾರದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿ ಹೇಳಿಕೆ ನೀಡಿರುವ ಅವರು, ವಕೀಲರ ಬಗ್ಗೆ ನನಗೆ ಅಪಾರ ಗೌರವವಿದೆ. ಮೈಸೂರು ವಕೀಲರ ಸಂಘದಿAದ ಯಾವುದೇ ಪ್ರಸ್ತಾಪವನ್ನು ನನ್ನ ಮುಂದೆ ಇಟ್ಟಾಗಲೂ ಸ್ಪಂದಿಸಿದ್ದೇನೆ. ಕಾಂಗ್ರೆಸ್ಸಿಗರ ಅಪಪ್ರಚಾರಕ್ಕೆ ವಕೀಲರುಗಳು ಕಿವಿಗೊಡಬಾರದೆಂದು ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಇಲ್ಲ ಸಲ್ಲದ ಆರೋಪ ಮಾಡುತ್ತಿರುತ್ತಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಕರ್ನಾಟಕದಿಂದ 19ಲಕ್ಷ ಕೋಟಿ ಹಣವನ್ನು ತೆರಿಗೆ ರೂಪದಲ್ಲಿ ಲೂಟಿ ಮಾಡಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಕೆ.ಜಿ.ಗೆ 32ರೂಪಾಯಿ ಕೊಟ್ಟು ಅಕ್ಕಿಯನ್ನು ಖರೀದಿಸಿ ರಾಜ್ಯ ಸರ್ಕಾರಕ್ಕೆ 3ರೂ.ಗೆ ನೀಡುತ್ತದೆ. ಅದರಲ್ಲಿ 2ರೂ.ಕಡಿಮೆ ಮಾಡಿ ನಾನು ಒಂದು ರೂ.ಗೆ ಅಕ್ಕಿ ಕೊಟ್ಟೆ ಎಂದು ಸಿದ್ದರಾಮಯ್ಯ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು.
ಆದರೆ ಕೇಂದ್ರ ಸರ್ಕಾರ ಭರಿಸುವ 29ರೂ.ಬಗ್ಗೆ ಎಂದೂ ಮಾತನಾಡಲಿಲ್ಲ. ಜಗತ್ತಿನಾದ್ಯಂತ ಇರುವ ರಾಜತಾಂತ್ರಿಕ ಕಛೇರಿಗಳು, 15ಲಕ್ಷ ಸೈನಿಕರು, 50ಲಕ್ಷಕ್ಕಿಂತ ಹೆಚ್ಚು ಕೇಂದ್ರ ಸರ್ಕಾರದ ಉದ್ಯೋಗಿಗಳು ಇವರಿಗೆ ಸಂಬಳ ಎಲ್ಲಿಂದ ಕೊಡಬೇಕು? ಪ್ರತಿವರ್ಷ ಖರೀದಿಸುವ ಶಸ್ತ್ರಾಸ್ತ ಗಳಿಗೆ ಕೋವಿಡ್ ಸಂದರ್ಭದಲ್ಲಿ ಕೊಟ್ಟ ಉಚಿತ ಲಸಿಕೆಗಳಿಗೆ ಕಳೆದ ಎರಡು ವರ್ಷಗಳಿಂದ ಪ್ರಧಾನಮಂತ್ರಿ ಅನ್ನ ಕಲ್ಯಾಣ ಯೋಜನೆಯಡಿ ನೀಡುತ್ತಿರುವ ಉಚಿತ ಪಡಿತರ ಇವುಗಳಿಗೆ ದುಡ್ಡು ಎಲ್ಲಿಂದ ಬರಬೇಕು, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಒಂದಕ್ಕೆ ವರ್ಷಕ್ಕೆ 50ರಿಂದ 60ಸಾವಿರ ಕೋಟಿ ಖರ್ಚಾಗುತ್ತದೆ. ಹೈವೇ-ರೈಲ್ವೆ , ಸ್ಮಾರ್ಟ್ ಸಿಟಿ, ಅಮೃತ್ ಯೋಜನೆಯಿಂದ 15ನೇ ಹಣಕಾಸು ಆಯೋಗದವರೆಗೂ 42ಕೇಂದ್ರ ಪುರಸ್ಕೃತ ಯೋಜನೆಗಳ ಮೂಲಕ ಲಕ್ಷಾಂತರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ವಾಪಸ್ಸು ರಾಜ್ಯಗಳಿಗೆ ನೀಡುತ್ತದೆ. ತಾಲೂಕು ಕೋರ್ಟ್ ನಲ್ಲಿ ವಕೀಲಗಿರಿ ಮಾಡುತ್ತಿದ್ದ ಸಿದ್ದರಾಮಯ್ಯನವರು 13 ಬಜೆಟ್ ಮಂಡಿಸಿದ್ದರೂ ಅರ್ಥ ವ್ಯವಸ್ಥೆಯ ಕನಿಷ್ಠ ಜ್ಞಾನವೂ ಇಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ನಾನು ಟೀಕೆ ಮಾಡಿದ್ದೇನೆ. ಹೊರತು ವಕೀಲ ವೃತ್ತಿಯ ಬಗ್ಗೆ ಹಗುರವಾಗಿ ಮಾತನಾಡಿರುವುದಿಲ್ಲ. ಆದರೂ ನನ್ನ ವಾದಕ್ಕೆ ಉತ್ತರಿಸಲಾಗದೇ ಕಾಂಗ್ರೆಸ್ಸಿನ ಕೆಲವರು ವಕೀಲರಿಗೆ ಅವಮಾನ ಮಾಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ