ಹೊಸದಿಗಂತ ವರದಿ ಮಡಿಕೇರಿ:
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವ ಅಗ್ನಿಪಥ್ ಯೋಜನೆಯಿಂದ ಈ ದೇಶದ ಲಕ್ಷಾಂತರ ಯುವ ಶಕ್ತಿಗಳಿಗೆ ದೇಶ ಸೇವೆ ಮಾಡಲು ಪ್ರೇರಣೆ ದೊರೆತಂತಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿಗಳ ಈ ತೀರ್ಮಾನವನ್ನು ಯೋಧರ ನಾಡದ ಕೊಡಗು ಬಿಜೆಪಿ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ ಎಂದು ಜೈನಿ ಅವರು ಹೇಳಿದ್ದಾರೆ.
17 ರಿಂದ 21 ವರ್ಷ ಯುವಕ ಮತ್ತು ಯುವತಿರಿಗೆ ಬಹಳ ಮಹತ್ವದ ಸಮಯವಾಗಿದ್ದು, ಈ ಸಮಯದಲ್ಲಿ ಯುವ ಶಕ್ತಿ ತೆಗೆದುಕೊಳ್ಳುವ ನಿಲುವು ಮುಂದಿನ ಅವರ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬಿರುತ್ತದೆ. ಈ ದೃಷ್ಟಿಯಲ್ಲಿ ಯೋಚಿಸಿದಾಗ ಪ್ರಧಾನಿಗಳು ಯುವ ಶಕ್ತಿಗೆ ಸರಿಯಾದ ಸಮಯದಲ್ಲಿ ದೇಶ ಸೇವೆ ಮಾಡಲು ಅನುವು ಮಾಡಿಕೊಟ್ಟಿರುವುದು ಮುಂದಿನ ಭವಿಷ್ಯದ ದೃಷ್ಟಿಯಿಂದ ಯುವ ಶಕ್ತಿಗೆ ಉತ್ತಮ ಅಡಿಪಾಯವಾಗಲಿದೆ ಎಂದು ಮಹೇಶ್ ಜೈನಿ ಅಭಿಪ್ರಾಯಪಟ್ಟಿದ್ದಾರೆ.
ಅನೇಕ ಮುಂದುವರಿದ ರಾಷ್ಟಗಳಲ್ಲಿ ಕೂಡಾ ಈ ರೀತಿಯ ವ್ಯವಸ್ಥೆಗಳಿದ್ದು, ತಮ್ಮ ತಮ್ಮ ದೇಶದ ರಕ್ಷಣೆ ಮತ್ತು ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಅಲ್ಲಿನ ಸರ್ಕಾರಗಳ ನಿರ್ಧಾರವನ್ನು ಯಾವ ವಿರೋಧ ಪಕ್ಷಗಳೂ ವಿರೋಧಿಸಿದ ಉದಾಹರಣೆಗಳಿಲ್ಲ. ಆದರೆ ಪ್ರತಿ ಚುನಾವಣೆಯಲ್ಲೂ ಸೋತು ನೆಲಕಚ್ಚಿರುವ ಕಾಂಗ್ರೆಸ್, ಪ್ರಧಾನಿಗಳ ಪ್ರತಿಯೊಂದು ಜನಪರ ಯೋಜನೆಗಳನ್ನೂ ವಿರೋಧಿಸುವ ಚಾಳಿ ಮುಂದುವರಿಸಿದ್ದು, ಈಗ ದೇಶ ರಕ್ಷಣೆ ವಿಷಯದಲ್ಲಿ ಪ್ರಧಾನಿಯವರು ಕೈಗೊಂಡ ಈ ಯೋಜನೆಯನ್ನು ವಿರೋಧಿಸುತ್ತಿರುವುದು ಕಾಂಗ್ರೆಸ್’ನ ದೇಶ ವಿರೋಧಿ ನಿಲುವನ್ನು ಸ್ಪಷ್ಟಪಡಿಸುತ್ತಿದೆ ಎಂದು ಜೈನಿ ಟೀಕಿಸಿದ್ದಾರೆ.
ಅಗ್ನಿಪಥ್ ಯೋಜನೆ ಯುವ ಶಕ್ತಿಯ ಪರವಾಗಿದ್ದು ಈಗಾಗಲೇ ಆಯ್ಕೆ ಮತ್ತು ಅದರಿಂದ ಆಗುವ ಲಾಭಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ದೇಶದ ಮೂರು ರಕ್ಷಣಾ ಪಡೆಗಳ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಯ್ಕೆಯಾದ (ಎಸ್ ಎಲ್ ಸಿ ಸಿ ಯಿಂದ ದ್ವಿತೀಯ ಪಿ ಯು ಸಿ ವಿದ್ಯಾರ್ಹತೆ )ಅಗ್ನಿ ವೀರರಿಗೆ ಸರ್ಕಾರ 6 ತಿಂಗಳ ತರಬೇತಿ, ಮೊದಲ ವರ್ಷ 4.76 ಲಕ್ಷದ ಪ್ಯಾಕೆಜ್ 4ನೇ ವರ್ಷ 6.92 ಲಕ್ಷ ಪ್ಯಾಕೆಜ್ ವಿವಿಧ ಭತ್ಯೆ 4 ವರ್ಷಗಳ ಅವಧಿ ಮುಗಿದೊಡನೆ ಶೇ.25 ಅಗ್ನಿವಿರರ ಮುಂದುವರಿಕೆ, ನಿರ್ಗಮಿಸುವವರಿಗೆ ಮುಂದಿನ ಅವರ ಭವಿಷ್ಯಕ್ಕಾಗಿ ಸುಮಾರು 16 ಲಕ್ಷ ದಷ್ಟು ಬ್ಯಾಂಕ್’ನಿಂದ ಸಾಲ ಪಡೆಯುವ ಅರ್ಹತೆ, ಅಕಸ್ಮಾತ್ ಈ ಅವಧಿಯಲ್ಲಿ ಅಂಗ ವೈಫಲ್ಯತೆ ಅಥವಾ ಮೃತಪಟ್ಟರೆ ಸುಮಾರು 44ಲಕ್ಷ ಮತ್ತು ಬಾಕಿ ಉಳಿದ ಸೇವಾವಧಿಯ ಪೂರ್ಣ ಸಂಬಳ ಒಟ್ಟಾರೆ ಸುಮಾರು 1ಕೋಟಿ ಯಷ್ಟು ಪರಿಹಾರ ಅಗ್ನಿವಿರರಿಗೆ ದೊರೆಯಲಿದೆ.
ಯುವಕ ಯುವತಿಯರ ಅರೋಗ್ಯ ದೃಷ್ಟಿಯಿಂದ ಕೂಡಾ ಇದೊಂದು ಸರ್ಕಾರದ ದಿಟ್ಟ ಹೆಜ್ಜೆಯಾಗಿದ್ದು, ಕಾಂಗ್ರೆಸ್’ನ ಯಾವ ಪ್ರತಿರೋಧಕ್ಕೂ ಬಗ್ಗದೆ ಸರ್ಕಾರ ಈ ಯೋಜನೆಯನ್ನು ಮುಂದುವರಿಸಲಿದೆ. ಇದರ ಸದುಪಯೋಗವನ್ನು ಯುವ ಜನತೆ ಪಡೆದುಕೊಳ್ಳುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ಭಾರತದ ಕನಸನ್ನು ನನಸು ಮಾಡುವಲ್ಲಿ ಸಹಕಾರ ನೀಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಮನವಿ ಮಾಡಿದೆ.