ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭು ಶ್ರೀರಾಮಚಂದ್ರನ ಭಕ್ತರಿಗೆ ಮತ್ತೊಂದು ಗುಡ್ನ್ಯೂಸ್!
ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿ.30 ರಂದು ಲೋಕಾರ್ಪಣೆಯಾಗಲಿದ್ದು, ಜ.6ರ ಬಳಿಕ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಸಂಪರ್ಕ ಕಲ್ಪಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಈ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಅಂದು ಏರ್ ಇಂಡಿಯಾದಿಂದ ಮೊದಲ ವಿಮಾನ ದೆಹಲಿಗೆ ಟೇಕ್ಆಫ್ ಆಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಅಯೋಧ್ಯೆಯ ವಿಮಾನ ನಿಲ್ದಾಣವು ನಗರದ ಐತಿಹಾಸಿಕ ಮಹತ್ವ, ಸಂಸ್ಕೃತಿಯ ಪ್ರತಿಬಿಂಬವಾಗಲಿದೆ. ದೇಶ ವಿದೇಶದ ಗಣ್ಯರು, ಪ್ರವಾಸಿಗರು ಭೇಟಿ ನೀಡುವ ಸಂದರ್ಭ ನಗರದ ಐತಿಹಾಸಿಕ ಮಹತ್ವ ಅವರ ಮುಂದೆ ಅನಾವರಣಗೊಳ್ಳಬೇಕಿದೆ. ಅಯೋಧ್ಯೆಯ ಸಂಸ್ಕೃತಿಯನ್ನು ಈ ವಿಮಾನ ನಿಲ್ದಾಣದಲ್ಲಿ ಕಟ್ಟಿಕೊಡುವ ಕೆಲಸ ಮಾಡಿದ್ದೇವೆ ಎಂದಿದ್ದಾರೆ.
ಬರೋಬ್ಬರಿ 6,500 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ವಿಮಾನ ನಿಲ್ದಾಣದಲ್ಲಿ ಒಂದು ತಾಸಿನಲ್ಲಿ ಮೂರು ವಿಮಾನಗಳನ್ನು ಲ್ಯಾಂಡಿಂಗ್ ಮಾಡಿಸಿಕೊಳ್ಳುವ ಸಾಮರ್ಥ್ಯವಿದೆ. ಸದ್ಯ 2,200 ಮೀಟರ್ ಉದ್ದದ ರನ್ವೇ ಇದೆ. ಇದನ್ನು 3,700 ಮೀಟರ್ಗೆ ವಿಸ್ತರಿಸಲು ಚಿಂತನೆ ನಡೆದಿದೆ.