ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಶಾಂತಿಯ ವಾತಾವರಣ ನಿರ್ಮಿಸಲು ಖುದ್ದು ಕ್ಷೇತ್ರಕ್ಕೆ ಕಾಲಿಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ರಾಜ್ಯ ರಾಜಧಾನಿ ಇಂಫಾಲದಲ್ಲಿ ಮಹಿಳೆಯರೊಂದಿಗೆ ವಿಶೇಷ ಸಭೆ ನಡೆಸಿದರು. ಅವರ ಜತೆಗಿನ ಸಭೆ ಬಳಿಕ ಶಾಂತಿ ಮಾತುಕತೆ ನಡೆಯುವ ಸಾಧ್ಯತೆ ಇದೆಯಂತೆ.
ಗೃಹ ಸಚಿವರು ಸೋಮವಾರದಿಂದ ನಾಲ್ಕು ದಿನಗಳ ಭೇಟಿಗಾಗಿ ಮಣಿಪುರಕ್ಕೆ ರಾಜ್ಯಪಾಲರಾದ ಅನುಸೂಯಾ ಒಕೆ ಮತ್ತು ಮುಖ್ಯಮಂತ್ರಿ ಎನ್ ಬೈರೆನ್ ಅವರೊಂದಿಗೆ ಆಗಮಿಸಿದರು. ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಿದರು. ಮಂಗಳವಾರ ಮಹಿಳಾ ಗುಂಪುಗಳ ಜತೆಗಿನ ಸಭೆಯ ನಂತರ ಎರಡೂ ಗುಂಪಿನೊಂದಿಗೆ ಶಾಂತಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಜೂನ್ 1ರವರೆಗೆ ಗೃಹ ಸಚಿವರು ಮಣಿಪುರದಲ್ಲೇ ಇರಲಿದ್ದಾರೆ.
ಮಣಿಪುರದಲ್ಲಿ ಮೇ 3 ರಿಂದ ಮೈತೇಯಿ-ಕುಕಿ ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಿಂದಾಗಿ ಅಶಾಂತಿ ನೆಲೆಸಿದೆ. ಅಂದಿನಿಂದ ಮಣಿಪುರದಲ್ಲಿ ಇಂಟರ್ನೆಟ್ ಅನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿ 34 ಸಾವಿರ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ವಾಸ್ತವವಾಗಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಇತ್ತೀಚೆಗೆ ಮಣಿಪುರದ 25 ಕ್ಕೂ ಹೆಚ್ಚು ಕುಕಿ ಬಂಡಾಯ ಗುಂಪುಗಳೊಂದಿಗೆ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಅದರಂತೆ ಸರ್ಕಾರವು ಗೊತ್ತುಪಡಿಸಿದ ಶಿಬಿರಗಳಿಗೆ ಬಂಡುಕೋರರು ಸೀಮಿತವಾಗಿರಬೇಕು. ಶಸ್ತ್ರಾಸ್ತ್ರಗಳನ್ನು ಪಕ್ಕಕ್ಕೆ ಇಡಬೇಕು.